ನವದೆಹಲಿ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ದೇಶದ ಎಲ್ಲಾ ವೈದ್ಯರಿಗೆ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜಗತ್ತಿನಲ್ಲಿ ಔಷಧ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸಾಧನೆ ಹಾಗೂ ಕೊಡುಗೆ ಅನನ್ಯ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಟ್ವೀಟ್ ಮೂಲಕ ಶುಭಾಶಯ ಕೋರಿರುವ ಪ್ರಧಾನಿ ಮೋದಿ ಅವರು, ಕಳೆದ ಭಾನುವಾರ ತಮ್ಮ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್‘ನಲ್ಲಿ ವೈದ್ಯರ ಕುರಿತು ಆಡಿರುವ ಮಾತುಗಳ ತುಣಕನ್ನು ಪೋಸ್ಟ್ ಮಾಡಿದ್ದಾರೆ.
‘ಕೋವಿಡ್ ಪಿಡುಗಿನ ಅವಧಿಯಲ್ಲಿ ಸಮಾಜಕ್ಕೆ ವೈದ್ಯರು ನೀಡಿರುವ ಸೇವೆಗೆ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ. ನಮ್ಮ ವೈದ್ಯರು ತಮ್ಮ ಜೀವನದ ಬಗ್ಗೆ ಕಾಳಜಿವಹಿಸದೆ, ನಮ್ಮನ್ನು ಆರೈಕೆ ಮಾಡಿದ್ದಾರೆ. ಆದ್ದರಿಂದ, ಈ ಬಾರಿ ರಾಷ್ಟ್ರೀಯ ವೈದ್ಯರ ದಿನವು ಹೆಚ್ಚು ವಿಶೇಷವಾಗಿದೆ’ ಎಂದು ಮೋದಿ ಅವರು ‘ಮನ್ ಕಿ ಬಾತ್’ನಲ್ಲಿ ವೈದ್ಯರ ಕಾರ್ಯವನ್ನು ಶ್ಲಾಘಿಸಿದ್ದರು.
ಖ್ಯಾತ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬಿ.ಸಿ.ರಾಯ್ ಅವರ ಜನ್ಮದಿನದ ನೆನಪಿಗಾಗಿ ಜುಲೈ 1 ಅನ್ನು ‘ವೈದ್ಯರ ದಿನ‘ವನ್ನಾಗಿ ಆಚರಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.