ADVERTISEMENT

ಡ್ರೋನ್‌ಗಳ ಸುಲಭ ಲಭ್ಯತೆ ಭದ್ರತೆಗೆ ಸವಾಲು: ಜನರಲ್‌ ನರವಣೆ

ಪಿಟಿಐ
Published 1 ಜುಲೈ 2021, 11:04 IST
Last Updated 1 ಜುಲೈ 2021, 11:04 IST
ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತದ ಭದ್ರತಾ ಪಡೆಯೊಂದಿಗೆ ಜನರಲ್‌ ಎಂ.ಎಂ.ನರವಣೆ ಮಾತುಕತೆ–ಸಾಂದರ್ಭಿಕ ಚಿತ್ರ
ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತದ ಭದ್ರತಾ ಪಡೆಯೊಂದಿಗೆ ಜನರಲ್‌ ಎಂ.ಎಂ.ನರವಣೆ ಮಾತುಕತೆ–ಸಾಂದರ್ಭಿಕ ಚಿತ್ರ   

ನವದೆಹಲಿ: ಡ್ರೋನ್‌ಗಳ ಸುಲಭ ಲಭ್ಯತೆಯ ಕಾರಣಗಳಿಂದಾಗಿ ಭದ್ರತೆಯ ಸವಾಲು ಮತ್ತಷ್ಟು ಕಠಿಣಗೊಂಡಿದ್ದು, ಭಾರತೀಯ ಸೇನೆಯು ಅಪಾಯಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಗುರುವಾರ ಹೇಳಿದರು.

ಭದ್ರತಾ ಪಡೆಗಳಿಗೆ ಸವಾಲಿನ ಬಗೆಗೆ ಅರಿವಿದೆ ಹಾಗೂ ಅವುಗಳನ್ನು ಎದುರಿಸಲು ಈಗಾಗಲೇ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜನರಲ್‌ ನರವಣೆ ಹೇಳಿದರು.

'ರಾಷ್ಟ್ರಗಳ ಪ್ರಾಯೋಜಕತ್ವದಿಂದ ಎದುರಾಗುವ ದಾಳಿಗಳಾಗಲಿ ಅಥವಾ ನೇರವಾಗಿ ರಾಷ್ಟ್ರಗಳಿಂದ ಬರುವ ಅಪಾಯಗಳನ್ನು ಎದುರಿಸುವ ಸಾಮರ್ಥ್ಯವನ್ನು ನಾವು ವೃದ್ಧಿಸಿಕೊಳ್ಳುತ್ತಿದ್ದೇವೆ. ಪ್ರತ್ಯಕ್ಷ ಮತ್ತು ಪರೋಕ್ಷ ಡ್ರೋನ್‌ ದಾಳಿಗಳನ್ನು ಎದುರಿಸಲು ಸಜ್ಜಾಗುತ್ತಿದ್ದೇವೆ' ಎಂದಿದ್ದಾರೆ.

ADVERTISEMENT

ಇತ್ತೀಚೆಗೆ ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆಯ ಕೇಂದ್ರದ ಮೇಲೆ ಡ್ರೋನ್‌ಗಳ ಮೂಲಕ ಬಾಂಬ್‌ ದಾಳಿ ನಡೆದಿತ್ತು.

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಜನರಲ್‌ ನರವಣೆ, 'ಫೆಬ್ರುವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಕದನ ವಿರಾಮ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅನಂತರದಲ್ಲಿ ಎಲ್‌ಒಸಿಯಲ್ಲಿ ಒಳನುಸುಳುವಿಕೆ ನಡೆದಿಲ್ಲ' ಎಂದು ತಿಳಿಸಿದ್ದಾರೆ.

ಒಳನುಸುಳುವಿಕೆಗೆ ಕಡಿವಾಣ ಬಿದ್ದಿರುವುದರಿಂದ ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿದೆ ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಗಳೂ ಕಡಿಮೆಯಾಗಿವೆ ಎಂದರು.

'ಶಾಂತಿ ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ಕೆಡಿಸಲು ಸದಾ ಒಂದಿಲ್ಲೊಂದು ಶಕ್ತಿಗಳು ಹವಣಿಸುತ್ತಿರುತ್ತವೆ; ಅದನ್ನು ನಾವು ಎದುರಿಸಬೇಕಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಭಯೋತ್ಪಾದನೆ ನಿಯಂತ್ರಣ ಮತ್ತು ಒಳನುಸುಳುವಿಕೆ ತಡೆಯುವ ಬಲಿಷ್ಠ ವ್ಯವಸ್ಥೆ ಹೊಂದಿದ್ದೇವೆ. ಶಾಂತಿ ಮತ್ತು ನಿರಾತಂಕದ ವಾತಾವರಣ ಕಾಪಾಡಲು ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.