ಲಖನೌ: ಪುಲ್ವಾಮ ಎನ್ಕೌಂಟರ್ನಲ್ಲಿ ಹುತಾತ್ಮನಾದಯೋಧನ ಅಂತ್ಯ ಸಂಸ್ಕಾರದ ವೇಳೆ ಶೂ ಧರಿಸಿದ್ದ ಬಿಜೆಪಿ ನಾಯಕರ ವಿರುದ್ಧ ಯೋಧನಕುಟುಂಬ ಆಕ್ರೋಶ ವ್ಯಕ್ತ ಪಡಿಸಿ, ಶೂ ಕಳಚುವಂತೆ ಹೇಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕೇಂದ್ರ ಸಚಿವ ಸತ್ಯಪಾಲ್ ಸಿಂಗ್, ಉತ್ತರ ಪ್ರದೇಶ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ಮತ್ತು ಮೀರತ್ ಬಿಜೆಪಿ ಶಾಸಕ ರಾಜೇಂದ್ರ ಅಗರ್ವಾಲ್, ಹುತಾತ್ಮ ಯೋಧ ಅಜಯ್ ಕುಮಾರ್ ಅಂತ್ಯ ಸಂಸ್ಕಾರದ ವೇಳೆ ಶೂ ಧರಿಸಿ ಕುಳಿತಿದ್ದರು.ಇದನ್ನು ಗಮನಿಸಿದ ಹುತಾತ್ಮ ಯೋಧನ ಕುಟುಂಬದ ಸದಸ್ಯರು ಶೂ ಕಳಚುವಂತೆ ಬಿಜೆಪಿ ನಾಯಕರಿಗೆ ಆದೇಶಿಸಿದ್ದಾರೆ. ಹುತಾತ್ಮ ಯೋಧನ ಅಂತ್ಯ ಸಂಸ್ಕಾರದ ವೇಳೆ ಯಾವ ರೀತಿ ವರ್ತಿಸಬೇಕೆಂದು ನಿಮಗೆ ತಿಳಿಯುತ್ತಿಲ್ಲವೇ? ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಆಗಿದೆ.ಆನಂತರ ತಪ್ಪಾಯಿತು ಎಂದು ಹೇಳಿದ ಬಿಜೆಪಿ ನಾಯಕರು ಶೂ ಕಳಚುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಯೋಧನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದಅಗರ್ವಾಲ್ ಮತ್ತು ಸತ್ಯಪಾಲ್ ಸಿಂಗ್ ಮಾತನಾಡುತ್ತಾ, ನಗುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಮೀರತ್ನ ಬಸ್ಸಿ ತಿಕ್ರಿ ಗ್ರಾಮದ ಯೋಧ ಅಜಯ್ ಕುಮಾರ್ (27) ಜೈಷ್-ಎ- ಮೊಹಮ್ಮದ್ ಸಂಘಟನೆಯ ಉಗ್ರರ ವಿರುದ್ಧಸೋಮವಾರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.