ನವದೆಹಲಿ: ಇಸ್ರೇಲ್ ಹಾಗೂ ಇರಾನ್ ನಡುವೆ ಉಂಟಾಗಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಈ ಹಿಂದೆ ಹೇಳಿಕೆದಂತಿದೆಯೇ ಸ್ಥಿರವಾಗಿದೆ. ಉದ್ವಿಗ್ನತೆಯ ಪರಿಸ್ಥಿತಿಯನ್ನು ಮಾತುಕತೆಯ ಮೂಲಕ ಶಮನಗೊಳಿಸುವಂತೆ ಎರಡು ರಾಷ್ಟ್ರಗಳನ್ನು ಭಾರತ ಒತ್ತಾಯಿಸುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಇಸ್ರೇಲ್ ಹಾಗೂ ಇರಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಎಸ್ಸಿಒ ಹೇಳಿಕೆ ಬೆನ್ನಲ್ಲೇ ಭಾರತ ಮತ್ತೊಮ್ಮೆ ತನ್ನ ನಿಲುವನ್ನು ವ್ಯಕ್ತಪಡಿಸಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಸದಸ್ಯ ರಾಷ್ಟ್ರಗಳು, ಇರಾನ್ ಮೇಲೆ ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಯನ್ನು ಬಲವಾಗಿ ಖಂಡಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
'ಪಶ್ಚಿಮ ಏಷ್ಯಾದಲ್ಲಿ ಇದೀಗ ಉಂಟಾಗಿರುವ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಾಗದಂತೆ ಉಭಯ ದೇಶಗಳು ಎಚ್ಚರಿಕೆ ವಹಿಸುವಂತೆ ಹಾಗೂ ರಾಜತಾಂತ್ರಿಕವಾಗಿ ವಿವಾದವನ್ನು ಶಮನಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಉಭಯ ದೇಶಗಳೊಂದಿಗೆ ಭಾರತ ನಿಕಟ ಹಾಗೂ ಸ್ನೇಹಪರ ಬಾಂಧವ್ಯವನ್ನು ಹೊಂದಿದೆ. ಸಾಧ್ಯವಾದ ಎಲ್ಲ ಬೆಂಬಲವನ್ನು ನೀಡಲು ಸಿದ್ಧವಾಗಿದೆ' ಎಂದೂ ಭಾರತ ಶುಕ್ರವಾರ ತಿಳಿಸಿತ್ತು.
ಇಸ್ರೇಲ್ನಿಂದ ಆಕ್ರಮಣಕಾರಿ ಕ್ರಮಗಳು ನಾಗರಿಕರ ಸಾವುನೋವುಗಳಿಗೆ ಕಾರಣವಾಗಿವೆ. ಇದು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಅಪಾಯಗಳನ್ನುಂಟುಮಾಡುತ್ತವೆ ಎಂದು ಎಸ್ಸಿಒ ಹೇಳಿದೆ.
ಪ್ರಸ್ತುತ ಚೀನಾ ಶಾಂಘೈ ಸಹಕಾರ ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡಿದೆ. ಆರ್ಥಿಕ ಮತ್ತು ಭದ್ರತಾ ಗುಂಪಿನ ಸದಸ್ಯ ರಾಷ್ಟ್ರಗಳಲ್ಲಿ ರಷ್ಯಾ, ಭಾರತ ಮತ್ತು ಪಾಕಿಸ್ತಾನ ಸೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.