ADVERTISEMENT

ಇನ್ನೂ ₹ 10 ಕೋಟಿ ಪರಿಹಾರ ನೀಡದ ಇಟಲಿ: ‘ಸುಪ್ರೀಂ’ಗೆ ಕೇಂದ್ರ ಮಾಹಿತಿ

ಭಾರತೀಯ ಮೀನುಗಾರರ ಕುಟುಂಬದ ಸಂಬಂಧಿಕರಿಗೆ ದೊರೆಕಬೇಕಾದ ಪರಿಹಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 12:44 IST
Last Updated 19 ಏಪ್ರಿಲ್ 2021, 12:44 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘2012ರ ಫೆಬ್ರುವರಿಯಲ್ಲಿ ಕೇರಳದ ಕರಾವಳಿಯಲ್ಲಿ ಇಟಲಿಯ ನೌಕಾಪಡೆ ಸಿಬ್ಬಂದಿಯಿಂದ ಸಾವಿಗೀಡಾದ ಇಬ್ಬರು ಭಾರತೀಯ ಮೀನುಗಾರರ ಸಂಬಂಧಿಕರಿಗೆ ಪರಿಹಾರವಾಗಿ ನೀಡಬೇಕಾದ ₹ 10 ಕೋಟಿ ಹಣವನ್ನು ಇಟಲಿ ಇನ್ನೂ ನೀಡಿಲ್ಲ’ ಎಂದು ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ನೌಕಾಪಡೆ ಸಿಬ್ಬಂದಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಮುಕ್ತಾಯಗೊಳಿಸಲು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರ ಅಧ್ಯಕ್ಷತೆಯ ಮೂವರು ನ್ಯಾಯಮೂರ್ತಿಗಳ ಪೀಠವು ₹ 10 ಕೋಟಿ ಮೊತ್ತವನ್ನು ಠೇವಣಿ ರೂಪದಲ್ಲಿ ಇಡಲಾಗಿದೆಯೇ ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಕೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ‘ಹಣದ ಸ್ವೀಕೃತಿಗಾಗಿ ನಾವು ಕಾಯುತ್ತಿದ್ದೇವೆ. ಇಟಲಿ ಸರ್ಕಾರ ಇನ್ನೂ ಹಣವನ್ನು ವರ್ಗಾಯಿಸಿಲ್ಲ’ ಎಂದರು.

ADVERTISEMENT

‘ಹಣ ಸ್ವೀಕೃತವಾಗುತ್ತಿದ್ದಂತೆಯೇ ಏಪ್ರಿಲ್ 9ರಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಪರಿಹಾರದ ಹಣವನ್ನು ನ್ಯಾಯಾಲಯಕ್ಕೆ ಜಮಾ ಮಾಡಲಾಗುವುದು’ ಎಂದು ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.