ರಿಯಾಸಿ/ ಜಮ್ಮು (ಪಿಟಿಐ): ಜಮ್ಮು–ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಐತಿಹಾಸಿಕ ದೇವಸ್ಥಾನಕ್ಕೆ ಹೋಗಲು ಅಗತ್ಯವಿರುವ ರಸ್ತೆ ನಿರ್ಮಾಣಕ್ಕಾಗಿ ಮುಸ್ಲಿಂ ಸಮುದಾಯದ ಕುಟುಂಬವೊಂದು ಬಿತ್ತನೆಗೆ ಯೋಗ್ಯವಾದ ಮುಕ್ಕಾಲು ಎಕರೆಯಷ್ಟು (ಆರು ಕನಾಲ್ಗಳು) ಜಮೀನನ್ನು ದೇಣಿಗೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ನಾಲ್ಕು ಜನ ಸಹೋದರರ ಪೈಕಿ ಒಬ್ಬರಾದ ಗುಲಾಂ ರಸೂಲ್, ‘ಐತಿಹಾಸಿಕ ಗುಪ್ತ ಕಾಶಿ ಗೌರಿ ಶಂಕರ ದೇವಸ್ಥಾನಕ್ಕೆ ತೆರಳಲು ನಿರ್ಮಿಸಲಿರುವ ರಸ್ತೆಗಾಗಿ ಸ್ವಯಂಪ್ರೇರಿತವಾಗಿ ಜಮೀನು ನೀಡಲು ನಿರ್ಧರಿಸಿದ್ದೇವೆ. ಇದನ್ನು ಎರಡೂ ಸಮುದಾಯಗಳು ಸ್ವಾಗತಿಸಿವೆ. ಹಲವು ವರ್ಷಗಳಿಂದಲೂ ಎರಡೂ ಸಮುದಾಯದವರು ಒಟ್ಟಿಗೆ ಜೀವಿಸುತ್ತಿದ್ದೇವೆ’ ಎಂದರು.
ರಿಯಾಸಿ ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದ ಕಾಶಿ ಪಟ್ಟ ಗ್ರಾಮದಲ್ಲಿರುವ ಶಿವನ ದೇವಾಲಯವನ್ನು ಛೋಟಾ ಕಾಶಿ ಎಂತಲೂ ಕರೆಯುತ್ತಾರೆ. ಈ ದೇವಾಲಯವನ್ನು ದೋಗ್ರಾ ರಾಜವಂಶಸ್ಥ ಮಹಾರಾಜ ಗುಲಾಬ್ ಸಿಂಗ್ ಅವರು 8ನೇ ಶತಮಾನದಲ್ಲಿ ನಿರ್ಮಿಸಿದ್ದರು ಎನ್ನಲಾಗಿದೆ.
ಈ ದೇವಸ್ಥಾನಕ್ಕೆ ಮೈದಾನದಂತಿರುವ ಪ್ರದೇಶದಲ್ಲಿ ನಡೆದುಕೊಂಡೇ ಹೋಗಬೇಕಿದೆ. ಹೀಗಾಗಿ ಈ ದೇವಸ್ಥಾನಕ್ಕೆ ಹೋಗಲು ರಸ್ತೆ ನಿರ್ಮಿಸುವ ಸಲುವಾಗಿ ಹಲವು ಹಿಂದೂ ಕುಟುಂಬಗಳು ತಮ್ಮ ಜಮೀನು ನೀಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.