ADVERTISEMENT

ಕಾಶ್ಮೀರ: ಉಗ್ರರ ದಾಳಿಯಲ್ಲಿ ಎಎಸ್‌ಐ ಸೇರಿ ಇಬ್ಬರು ಸಾವು- 12 ಮಂದಿಗೆ ಗಾಯ

ಪೊಲೀಸ್‌ ಬಸ್‌ ಮೇಲೆ ಉಗ್ರರ ದಾಳಿ; ಶ್ರೀನಗರದ ಝೆವಾನ್‌ ಪ್ರದೇಶದ ಬಳಿ ಘಟನೆ

ಸಿದ್ದರಾಜು ಎಂ.
Published 13 ಡಿಸೆಂಬರ್ 2021, 16:14 IST
Last Updated 13 ಡಿಸೆಂಬರ್ 2021, 16:14 IST
ಶ್ರೀನಗರದ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಬಳಿ ಝೆವಾನ್‌ ಪ್ರದೇಶದಲ್ಲಿ ಉಗ್ರರ ದಾಳಿಗೆ ಒಳಗಾದ ಪೊಲೀಸ್‌ ಬಸ್‌
ಶ್ರೀನಗರದ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಬಳಿ ಝೆವಾನ್‌ ಪ್ರದೇಶದಲ್ಲಿ ಉಗ್ರರ ದಾಳಿಗೆ ಒಳಗಾದ ಪೊಲೀಸ್‌ ಬಸ್‌   

ಶ್ರೀನಗರ: ಇಲ್ಲಿನ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯ ಝೆವಾನ್‌ ಪ್ರದೇಶದ ಬಳಿ ಸೋಮವಾರ ಉಗ್ರರು ಪೊಲೀಸ್‌ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಎಎಸ್‌ಐ ಸೇರಿ ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಎಎಸ್‌ಐ ಗುಲಾಂ ಹಸನ್‌ ಭಟ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ ಶಫೀಕ್‌ ಅಲಿ ಹುತಾತ್ಮರಾದವರು. ಘಟನೆಯಲ್ಲಿ ಗಾಯಗೊಂಡ ಎಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು

‘ಪಂತ್‌ ಚೌಕದ ಬಳಿ ತೆರಳುತ್ತಿದ್ದ ಭಾರತೀಯ ಮೀಸಲು ಪೊಲೀಸ್‌ (ಐಆರ್‌ಪಿ) 9ನೇ ತುಕಡಿಯ ಬಸ್ಸಿನ ಮೇಲೆ ಎರಡ್ಮೂರು ಜನರಿದ್ದ ಉಗ್ರರ ಗುಂಪು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 12 ಪೊಲೀಸರು ಗಾಯಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಉಗ್ರರ ವಿರುದ್ಧ ಭಾರಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಝೆವಾನ್‌ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ. ದಾಳಿ ನಡೆದ ಸ್ಥಳದ ಸಮೀಪದಲ್ಲೇ ಡಿಐಜಿಪಿ ರ‍್ಯಾಂಕ್‌ನ ಪೊಲೀಸ್‌ ಅಧಿಕಾರಿ, ಭಾರತೀಯ ಸೇನೆಯ ಮೂವರು ಕಮಾಂಡಿಂಗ್‌ ಅಧಿಕಾರಿಗಳ ಕಚೇರಿ ಸೇರಿದಂತೆ ಸೇನೆ, ಸಿಆರ್‌ಪಿಎಫ್‌ ಹಾಗೂ ಬಿಎಸ್ಎಫ್‌ನ ಹಲವು ಶಿಬಿರಗಳಿದ್ದು, ಅತ್ಯಂತ ಸುರಕ್ಷಿತ ಪ್ರದೇಶದಲ್ಲೇ ಇಂತಹ ದಾಳಿ ನಡೆದಿರುವುದು ಪೊಲೀಸರನ್ನು ಕಂಗೆಡಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ನಡೆದ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವರ ಕೇಳಿದ್ದು, ದಾಳಿಯಲ್ಲಿ ಹುತಾತ್ಮರಾದ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಅವರು ಹುತಾತ್ಮ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.