ನಿನ್ನೆ ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಔದಾರ್ಯ ಮೆರೆದಿದ್ದ ಹೈದರಾಬಾದ್ನ ಸೇನಾ ವೈದ್ಯ ಮೇಜರ್ ಡಾ.ರೋಹಿತ್
ಝಾನ್ಸಿ: ನಿನ್ನೆ ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಔದಾರ್ಯ ಮೆರೆದಿದ್ದ ಹೈದರಾಬಾದ್ನ ಸೇನಾ ವೈದ್ಯ ಮೇಜರ್ ಡಾ.ರೋಹಿತ್ ಬಚ್ವಾಲಾ (31) ಅವರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸೇನೆಯ ಜನರಲ್ ಉಪೇಂದ್ರ ದ್ವಿವೇಧಿ ಅವರು ಡಾ.ರೋಹಿತ್ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಡಾ.ರೋಹಿತ್ ಅವರು ಮಿಲಿಟರಿ ಸೇವೆಯ ಅತ್ಯುನ್ನತ ಗುಣಮಟ್ಟವನ್ನು ತೋರಿಸುವ ನಿರ್ಣಾಯಕ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ರೋಹಿತ್ ಅವರು ಹೇರಿಗೆ ಮಾಡಿಸಿದ ಫೋಟೊಗಳನ್ನು ಹಂಚಿಕೊಂಡು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಪನವೇಲ್–ಗೋರಖಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಶನಿವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಮಹಿಳೆ ಗೋಳಾಡುವುದನ್ನು ಕಂಡ ಟಿಕೆಟ್ ಚೆಕ್ಕಿಂಗ್ ಸಿಬ್ಬಂದಿ ಮತ್ತು ಸೇನಾ ವೈದ್ಯಾಧಿಕಾರಿ ಕೂಡಲೇ ಕಾರ್ಯಪ್ರವೃತ್ತರಾದರು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದರು.
ಈ ಸಮಯದಲ್ಲಿ ಅದೇ ನಿಲ್ದಾಣದಲ್ಲಿ ಡಾ.ರೋಹಿತ್ ಬಚ್ವಾಲಾ (31) ಅವರು ಇನ್ನೊಂದು ರೈಲಿಗಾಗಿ ಕಾಯುತ್ತಿದ್ದರು. ತುಂಬು ಗರ್ಭಿಣಿಯನ್ನು ಕಂಡು ಸಹಾಯ ಮಾಡಲು ಮುಂದಾದ ಅವರು ರೈಲ್ವೆ ಸಿಬ್ಬಂದಿಯ ನೆರವಿನೊಂದಿಗೆ ಹೇರ್ ಕ್ಲಿಪ್, ಪಾಕೆಟ್ ಚಾಕು ಬಳಸಿ ಹೆರಿಗೆ ಮಾಡಿಸಿದರು.
‘ಹೊಟ್ಟೆ ನೋವಿನಿಂದ ಬಳಲಿದ್ದ ಮಹಿಳೆಯನ್ನು ಕಂಡ ಕೂಡಲೇ ಸಮಯ ವ್ಯರ್ಥ ಮಾಡದೇ ಪ್ಲಾಟ್ಫಾರ್ಮ್ನಲ್ಲಿಯೇ ಹೆರಿಗೆ ಮಾಡಿಸಲು ಸಿದ್ಧನಾದೆ. ವೈದ್ಯರು ತುರ್ತು ಸಂದರ್ಭಕ್ಕೆ ಸದಾ ಸಿದ್ಧರಾಗಿರಬೇಕು. ದೇವರ ದಯೆಯಿಂದ ನಾನು ಎರಡು ಜೀವಗಳನ್ನು ಉಳಿಸಿದೆ’ ಎಂದು ಡಾ.ರೋಹಿತ್ ತಿಳಿಸಿದರು.
ಹೆರಿಗೆ ಬಳಿಕ ಮಗು ಮತ್ತು ಬಾಣಂತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.