ರಾಂಚಿ: ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸ್ವಯಂ ಉದ್ಯೋಗ ಕೈಗೊಂಡವರಿಗೆ ಪಿಂಚಣಿ ಸೌಲಭ್ಯ ನೀಡುವ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಚಾಲನೆ ನೀಡಿದರು.
ಸಣ್ಣ ಹಾಗೂ ಮಧ್ಯಮ ರೈತರು ‘ಪ್ರಧಾನ್ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆ’ಯಡಿ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ 60 ವರ್ಷ ಆದಾಗ, ಮಾಸಿಕ ಕನಿಷ್ಠ ₹ 3,000 ಪಿಂಚಣಿ ನೀಡಲಾಗುತ್ತದೆ.
ಸಣ್ಣ ವ್ಯಾಪಾರಿಗಳು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ‘ಪ್ರಧಾನ್ ಮಂತ್ರಿ ಲಘು ವ್ಯಾಪಾರಿ ಮಾನ್ಧನ್ ಯೋಜನೆ’, ಸ್ವಯಂ ಉದ್ಯೋಗ ಕೈಗೊಂಡವರಿಗಾಗಿ ‘ಸ್ವರೋಜಗಾರ್ ಪಿಂಚಣಿ ಯೋಜನೆ’ಗೂ ಚಾಲನೆ ನೀಡಲಾಯಿತು.
ಯೋಜನೆಯ ವೈಶಿಷ್ಟ್ಯಗಳು
*18–40 ವರ್ಷದ ಒಳಗಿನವರು ಹಾಗೂ ಮಾಸಿಕ ₹ 15,000ಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು
*ಫಲಾನುಭವಿ ತುಂಬುವ ಕಂತಿನ ಮೊತ್ತದಷ್ಟೇ ಹಣವನ್ನು ಸರ್ಕಾರ ಭರಿಸುವುದು. ಈ ಯೋಜನೆಯಡಿ ನೋಂದಣಿಗೆ ಕನಿಷ್ಠ ಶಿಕ್ಷಣ ಪಡೆದಿರಬೇಕು ಎಂಬ ನಿಬಂಧನೆ ಇಲ್ಲ.
*ಎನ್ಪಿಎಸ್, ಇಎಸ್ಐಸಿ, ಇಪಿಎಫ್ ಸೌಲಭ್ಯ ಹೊಂದಿದವರು ಹಾಗೂ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗಳ ಲಾಭ ಪಡೆಯಲು ಅರ್ಹರಲ್ಲ.
*ಫಲಾನುಭವಿಯ ವಯಸ್ಸಿಗೆ ಅನುಗುಣವಾಗಿ ಮಾಸಿಕ ₹ 55 ರಿಂದ ₹ 400 ರಂತೆ 60 ವರ್ಷದ ವರೆಗೆ ಕಂತು ತುಂಬಬೇಕು. ಯೋಜನೆ ಕುರಿತ ವಿವರಗಳಿಗೆ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.