ಕೋಲ್ಕತ್ತ: ’ಜಾತಿ ಆಧಾರಿತ ಮೀಸಲಾತಿಯನ್ನು ತೆಗೆದುಹಾಕುವುದೇ ಬಿಜೆಪಿ–ಆರ್ಎಸ್ಎಸ್ ಕಾರ್ಯಸೂಚಿಯಾಗಿದೆ’ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
‘ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸಿರುವುದು ಈ ಕಾರ್ಯಸೂಚಿಯ ಮೊದಲ ಹೆಜ್ಜೆಯಾಗಿದೆ’ ಎಂದು ದೂರಿದ್ದಾರೆ.
‘ಸಂವಿಧಾನ ನಾಶ ಮಾಡುವುದು ಮತ್ತು ಜಾತಿ ಆಧಾರಿತ ಮೀಸಲಾತಿಯನ್ನು ಅಂತ್ಯಗೊಳಿಸುವುದು ಆರ್ಎಸ್ಎಸ್–ಬಿಜೆಪಿಯ ಅತ್ಯಂತ ಹಳೆಯ ಕಾರ್ಯಸೂಚಿಯಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವವರಿಗೆ ಪ್ರಾತಿನಿಧ್ಯ ನೀಡಲು ಮೀಸಲಾತಿ ಕಲ್ಪಿಸಲಾಗಿದೆಯೇ ಹೊರತು ಬಡತನ ನಿರ್ಮೂಲನೆಗೆ ಅಲ್ಲ’ ಎಂದು ಮೇವಾನಿ ಪ್ರತಿಪಾದಿಸಿದರು.
‘ಇತರ ಸಮುದಾಯಗಳ ಬಡವರಿಗೆ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ಈ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಜಾತಿ ವ್ಯವಸ್ಥೆಯಿಂದಾಗಿ ಹಿಂದುಳಿದಿರುವ ಪರಿಶಿಷ್ಟರಿಗೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮುಂದುವರಿಸುವ ಅಗತ್ಯವಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.