ಜೈಪುರ: ರಾಜಸ್ಥಾನದ ಜೈಸಲ್ಮೇರ್ ಹಾಗೂ ಆಸುಪಾಸಿನ ಭಾಗದ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಬಹುತೇಕ ವಿಲಕ್ಷಣ ಮೌನ. ನಿವಾಸಿಗಳಲ್ಲಿ ದಿಗಿಲು. ಮನೆಯ ಒಳಗೆ ಮತ್ತು ಹೊರಗೂ ಕತ್ತಲು ಆವರಿಸಿತ್ತು. ಏನಾಗುತ್ತಿದೆ, ಏನಾದಿತು ಎಂಬ ಉತ್ತರವಿಲ್ಲದ ಪ್ರಶ್ನೆಗಳು.
ಈ ಭಾಗದ ಹೆಚ್ಚಿನ ನಿವಾಸಿಗಳಲ್ಲಿ ಯಾರ ಜೊತೆ, ಏನು ಮಾತನಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಫೋನ್ನಲ್ಲಿ ಚರ್ಚೆಯೇ ಬೇಡ ಎಂದು ನಿರ್ಧರಿಸಿದಂತಿತ್ತು. ಅದರ ಹಿಂದಿನ ದಿನವಷ್ಟೇ ಈ ವ್ಯಾಪ್ತಿಯಲ್ಲಿ ಪಾಕ್ ನೆಲದಿಂದ ಡ್ರೋನ್ ದಾಳಿ ನಡೆದಿತ್ತು.
ಮನೆಗಳ ಒಳಗೆ, ಹೊರಗೆ ಅಕ್ಷರಶಃ ‘ಬ್ಲ್ಯಾಕ್ಔಟ್’ ಇದ್ದ ಅನಿಶ್ಚಿತ ರಾತ್ರಿಯಲ್ಲೂ ಜನರಿಗಿದ್ದ ಒಂದೇ ನೆಮ್ಮದಿ ಎಂದರೆ: ಪಹಲ್ಗಾಮ್ ದಾಳಿಗೆ ಪ್ರತೀಕಾರದ ಹೆಜ್ಜೆಗಳನ್ನು ಭಾರತ ಇಡುತ್ತಿದೆ. ನಾವು ದೇಶದ ಹಿತರಕ್ಷಣೆಗಾಗಿ ಈ ಸಂದರ್ಭ ಎದುರಿಸುತ್ತಿದ್ದೇವೆ ಎಂಬುದು.
‘ಪ್ರಜಾವಾಣಿ‘ ಜೊತೆ ಮಾತನಾಡಿದ ಸ್ಥಳೀಯ ಪಂಚಾಯತ್ ಸಮಿತಿ ಪ್ರತಿನಿಧಿ ಭಗವಾನ್ ಪರಿಹಾರ್ ಅವರು, ‘ಇಂಥ ಸ್ಥಿತಿಯನ್ನು ಇತ್ತೀಚೆಗೆ ನೋಡಿಯೇ ಇರಲಿಲ್ಲ. ಪಹಲ್ಗಾಮ್ನ ಘಟನೆಗೆ ಪ್ರತಿಯಾಗಿ ಪಾಕಿಸ್ತಾನದ ನುಸುಳುಕೋರರ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು’ ಎಂದರು.
54 ವರ್ಷಗಳ ಬಳಿಕ ಈ ವಲಯದಲ್ಲಿ ದಾಳಿ ನಡೆಯುತ್ತಿದೆ. ಜೈಸಲ್ಮೇರ್, ಬರ್ಮೆರ್, ಜೋಧಪುರ, ಆಸುಪಾಸಿನ ಪ್ರದೇಶಗಳಲ್ಲಿ ಹಿಂದೆ 1965, 1971ರ ಯುದ್ಧದಲ್ಲಿ ಪಾಕ್ ದಾಳಿ ನಡೆಸಿತ್ತು.
‘ಈ ಬಾರಿ ಪಾಕಿಸ್ತಾನದಿಂದ ಬಿಕನೇರ್ನ ನಾಲ್, ಜೋಧಪುರದ ಫಲೊಡಿ ಮತ್ತು ಬರ್ಮೆರ್ನ ಉತರಲೈನಲ್ಲಿ ದಾಳಿ ಆಗಿದೆ’ ಎನ್ನುತ್ತವೆ ಮೂಲಗಳು.
ಈ ಪ್ರತಿನಿಧಿ ಸಂಪರ್ಕಿಸಲು ಯತ್ನಿಸಿದ್ದ ಬಹುತೇಕ ಸ್ಥಳೀಯ ಪತ್ರಕರ್ತರೂ ರಾತ್ರಿಯ ಬೆಳವಣಿಗೆಗಳ ಬಗ್ಗೆ ಮಾತನಾಡಲು ಸಿದ್ಧರಿರಲಿಲ್ಲ. ಮಾತು ದೇಶದ ಹಿತಾಸಕ್ತಿಗೆ ವಿರುದ್ಧ ಎಂದು ನಿರ್ಧರಿಸಿದಂತಿತ್ತು. ಯಾರ ಜೊತೆ ಮಾತನಾಡುತ್ತಿದ್ದೇವೆ ಎಂದು ಶಂಕೆಯಿಂದಲೇ ನೋಡುತ್ತಿದ್ದರು. ‘ಜಾಲತಾಣದಲ್ಲಿ ವದಂತಿಗಳೇ ಇವೆ. ಈಗ ನಾವು ಮೌನವಾಗಿ ಇರುವುದೇ ಲೇಸು’ ಎಂದವರು ಹಲವರು.
ಸಾಕಷ್ಟು ಯತ್ನದ ಬಳಿಕ ಇಬ್ಬರು ಮಾತಿಗೆ ಸಿಕ್ಕರು. ಜೈಸಲ್ಮೇರ್ನ ಸೀಮಾಂತ್ ಲೋಕ್ ಸಂಘಟನೆಯ ಕಾರ್ಯಕರ್ತ ದಿಲೀಪ್ ಸಿಂಗ್ ಸೋಧಾ, ‘ರಾತ್ರಿ 9ಕ್ಕೆ ಮನೆಗೆ ಬರುತ್ತಿದ್ದೆ. ಆಗಸದಲ್ಲಿ ದಿಢೀರ್ ಡ್ರೋನ್ಗಳು ಕಂಡವು. 70–80 ಡ್ರೋನ್ಗಳಿರಬಹುದು. ಹಿಂದೆಂದೂ ನೋಡಿರಲಿಲ್ಲ’ ಎಂದರು.
‘ಹೆಸರಾಂತ ಜೈಸಲ್ಮೇರ್ ಕೋಟೆ ಮೇಲೆ ದಾಳಿ ಆಗಲಿದೆ ಎಂಬ ವದಂತಿ ಇತ್ತು. ರಾತ್ರಿ 9 ರಿಂದ ಬೆಳಿಗ್ಗೆ 4 ಗಂಟೆವರೆಗೆ ಬ್ಲ್ಯಾಕ್ಔಟ್ ಘೋಷಿಸಲಾಗಿತ್ತು. ನಾವೂ ಮಾನಸಿಕವಾಗಿ ಸಿದ್ಧವಾಗಿದ್ದೆವು. ಭಾರತೀಯ ಸೇನೆ ಈ ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ತಿಳಿದಾಗ ನೆಮ್ಮದಿ ಆವರಿಸಿತು’ ಎಂದರು.
ಸ್ಥಳೀಯ ಗುತ್ತಿಗೆದಾರ ನಿವಾಸಿ ಪಪ್ಸಾ ಸೋಧಾ ಮಸುರಿಯಾ, ‘ಸಂಭವನೀಯ ದಾಳಿ ಹಾಗೂ ಸೈರನ್ ಮೊಳಗಿಸುವ ಕುರಿತು ಮೊದಲೇ ಮಾಹಿತಿ ಇತ್ತು. ಅಂತೆಯೇ ರಾತ್ರಿ 9ರ ವೇಳೆಗೆ 70–80 ಡ್ರೋನ್ಗಳ ದಾಳಿ ನಡೆಯಿತು. ಆಗ ಬಹುತೇಕ ಜನರು ಮನೆ ತೊರೆದು ರಸ್ತೆಗಳಲ್ಲಿ ಗುಂಪುಗೂಡಿದ್ದೆವು’ ಎಂದರು.
ಜೈಸಲ್ಮೇರ್ ವಲಯ ಪಾಕಿಸ್ತಾನದ ಗಡಿಯಿಂದ 464 ಕಿ.ಮೀ. ದೂರದಲ್ಲಿದೆ. ಗಡಿಗೆ ಹತ್ತಿರದ ಗ್ರಾಮಗಳಿಂದ ಜನರನ್ನು ತೆರವುಗೊಳಿಸಲಾಗಿದೆ. ಜೈಸಲ್ಮೇರ್ನ ಕೃಷ್ಣಘರ್ ವಲಯದ ಜೋಗಿಯೊ ಕಿ ಬಸ್ತಿ ಬಳಿ ಸಕ್ರಿಯ ಬಾಂಬ್ ಪತ್ತೆಯಾಗಿದ್ದು, ಸಿಬ್ಬಂದಿ ತದನಂತರ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಮುಂಜಾಗ್ರತೆ ಕ್ರಮವಾಗಿ ಬರ್ಮೆರ್, ಜೈಸಲ್ಮೇರ್ಗೆ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಜೋಧಪುರ, ಬಿಕನೇರ್, ಕೃಷ್ಣಘರ್ನಲ್ಲಿನ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.
ಪಂಜಾಬ್: ಸೈರನ್ ಸದ್ದು ಆತಂಕ
ಚಂಡೀಗಢ (ಪಿಟಿಐ): ಪಂಜಾಬ್ನ ಗಡಿ ಗ್ರಾಮಗಳಲ್ಲೂ ಗುರುವಾರ ರಾತ್ರಿ ಭಿನ್ನ ಆಗಿರಲಿಲ್ಲ. ಜನರು ಮನೆಯಿಂದ ಹೊರ ಬಂದಿರಲಿಲ್ಲ. ಆಗಾಗ್ಗೆ ಸೈರನ್ ಮೊಳಗುತ್ತಿದ್ದವು. ‘ಬ್ಲಾಕ್ಔಟ್‘ ಘೋಷಿಸಲಾಗಿತ್ತು. ಆಗಾಗ್ಗೆ ಸ್ಪೋಟದ ಶಬ್ದ ಕೇಳಿಬರುತ್ತಿತ್ತು. ಶುಕ್ರವಾರ ಬೆಳಿಗ್ಗೆ ಜನತೆ ನಿರಾಳರಾಗಿದ್ದರೂ ಏನಾದಿತೋ ಎಂಬ ಆತಂಕ ನಿವಾರಣೆ ಆಗಿರಲಿಲ್ಲ. ಪಾಕಿಸ್ತಾನದ ಜೊತೆಗೆ ಪಂಜಾಬ್ 532 ಕಿ.ಮೀ ಗಡಿ ಹೊಂದಿದ್ದರೆ ರಾಜಸ್ತಾನ ಒಟ್ಟು 1070 ಕಿ.ಮೀ ಗಡಿಯನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.