ನವದೆಹಲಿ: ವಿದ್ಯಾರ್ಥಿಗಳ ಗುಂಪೊಂದು ಕೇಂದ್ರೀಯ ಗ್ರಂಥಾಲಯಕ್ಕೆ ನುಗ್ಗಿ, ಅಲ್ಲಿಯ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದೆ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್ಯು) ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ. ಎರಡು ದಿನಗಳಿಂದ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿಯೇ ಇದ್ದಾರೆ ಎಂದು ಗ್ರಂಥಾಲಯ ಸಿಬ್ಬಂದಿ ಆರೋಪಿಸಿದ್ದಾರೆ.
ಇದು ಮಂಗಳವಾರ ನಡೆದಿದೆ. ವಿಶ್ವವಿದ್ಯಾಲಯದ ಮುಖ್ಯ ಭದ್ರತಾ ಅಧಿಕಾರಿಯ ದೂರಿನ ಆಧಾರದ ಮೇಲೆಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ, ದೆಹಲಿ ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ನೈಋತ್ಯ ದೆಹಲಿ ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದಿದ್ದಾರೆ.
ವಿದ್ಯಾರ್ಥಿಗಳ ಗುಂಪು ಬಿ.ಆರ್. ಅಂಬೇಡ್ಕರ್ ಗ್ರಂಥಾಲಯಕ್ಕೆ ನುಗ್ಗಿ ಭದ್ರತಾ ಸಿಬ್ಬಂದಿ ಜೊತೆ ಘರ್ಷಣೆ ನಡೆಸಿದೆ. ಬಳಿಕ ಗಾಜಿನ ಬಾಗಿಲನ್ನು ಒಡೆದು, ಗ್ರಂಥಾಲಯದ ಮುಖ್ಯ ಅಧ್ಯಯನ ಕೋಣೆಗೆ ತೆರಳಿದೆ. ಅಂದಿನಿಂದ ಆ ಗುಂಪು ಆ ಕೋಣೆಯಲ್ಲಿಯೇ ಇದೆ.ಗ್ರಂಥಾಲಯಕ್ಕೆ ನುಗ್ಗಿದ ವಿದ್ಯಾರ್ಥಿಗಳು ಕೋವಿಡ್–19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಲ್ಲ. ಮಾಸ್ಕ್ ಧರಿಸಿಲ್ಲ. ಗ್ರಂಥಾಲಯವನ್ನು ಸ್ಯಾನಿಟೈಸ್ ಮಾಡಲು ಅವಕಾಶ ಕೊಡುತ್ತಿಲ್ಲ. ಈ ವಿದ್ಯಾರ್ಥಿಗಳು ಊಟಕ್ಕೆ ಹಾಸ್ಟೆಲ್ಗೆ ಹೋಗಿ ಬರುತ್ತಿದ್ದಾರೆ. ಹಾಗಾಗಿ,ಗ್ರಂಥಾಲಯದ ಸಿಬ್ಬಂದಿ ಮತ್ತು ಹಾಸ್ಟೆಲ್ನಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಅನಾರೋಗ್ಯದ ಅಪಾಯ ಎದುರಾಗಿದೆ ಎಂದು ಜೆಎನ್ಯು ಪ್ರಕಟಣೆ ತಿಳಿಸಿದೆ.
‘ಗ್ರಂಥಾಲಯ ಬಹಳ ದಿನಗಳಿಂದ ತೆರೆದಿಲ್ಲ. ಇದರಿಂದ ಪಿಎಚ್ಡಿ ವಿದ್ಯಾರ್ಥಿಗಳು ರೋಸಿಹೋಗಿದ್ದಾರೆ. ಅವರ ಪ್ರಬಂಧ ಸಲ್ಲಿಕೆ ಬಾಕಿ ಇದೆ, ಆದರೆ ಗ್ರಂಥಾಲಯಕ್ಕೆ ಪ್ರವೇಶವಿಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ಗ್ರಂಥಾಲಯ ಪ್ರವೇಶಿಸಿದ್ದಾರೆ. ಯಾವುದೇ ಹಿಂಸಾಚಾರ ನಡೆಸಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.