ಕೋಲ್ಕತ್ತ: ಲಾಕ್ಡೌನ್ನಿಂದಾಗಿ ವಿಮಾನ ಮತ್ತು ರೈಲು ಸಂಚಾರ ಸೇವೆಗಳು ಸ್ಥಗಿತಗೊಂಡಿದ್ದು, ಇದರ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲ ನ್ಯಾಯಮೂರ್ತಿಗಳಿಗೂ ತಟ್ಟಿದೆ.
ಈಚೆಗಷ್ಟೇಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಹೊಂದಿರುವ ಇಬ್ಬರು ನ್ಯಾಯಮೂರ್ತಿಗಳು ಬೇರೆ ಬೇರೆ ಸ್ಥಳಗಳಲ್ಲಿ ಅಧಿಕಾರ ವಹಿಸಿಕೊಳ್ಳಲು ರಸ್ತೆ ಮೂಲಕವೇ ಸುಮಾರು 2 ಸಾವಿರ ಕಿ.ಮೀ. ಪ್ರಯಾಣ ಬೆಳೆಸಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿದ್ದ ದೀಪಂಕರ್ ದತ್ತ ಅವರು ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅವರು ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ಮುಂಬೈಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಮತ್ತೊಂದೆಡೆ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಬಿಸ್ವನಾಥ್ ಸೋಮದ್ದರ್ ಅವರು, ಮೇಘಾಲಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪತ್ನಿಯೊಂದಿಗೆ ಕಾರಿನಲ್ಲಿ ಕೋಲ್ಕತ್ತ ಮೂಲಕ ಶಿಲ್ಲಾಂಗ್ಗೆ ಪ್ರಯಾಣ ಬೆಳೆಸಿದ ಬಿಸ್ವನಾಥ್ ಅವರು ಭಾನುವಾರ ಮಧ್ಯಾಹ್ನದ ಹೊತ್ತಿಗೆ ಶಿಲ್ಲಾಂಗ್ ತಲುಪಿದರು.
ಶನಿವಾರ ಬೆಳಿಗ್ಗೆ ಕೋಲ್ಕತ್ತಾದಿಂದ ಹೊರಟಿರುವ ನ್ಯಾಯಮೂರ್ತಿಗಳಾದ ದತ್ತ ಅವರು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮುಂಬೈಗೆ ತಲುಪುವ ನಿರೀಕ್ಷೆ ಇದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಬಿಸ್ವನಾಥ್ ಸೋಮದ್ದರ್ ಅವರಿಗೆ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಿದ್ದರು. 2006ರ ಜೂನ್ 22ರಂದು ಈ ಇಬ್ಬರು ನ್ಯಾಯಮೂರ್ತಿಗಳು ಕೋಲ್ಕತ್ತ ಹೈಕೋರ್ಟ್ನ ಕಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.