ತಿರುವನಂತಪುರ: ರಾಜ್ಯದ ಆರು ಜಿಲ್ಲೆಗಳಲ್ಲಿ ಕೋವಿಶೀಲ್ಡ್ ಲಸಿಕೆ ದಾಸ್ತಾನು ಸಂಪೂರ್ಣ ಮುಗಿದಿದೆ. ರಾಜ್ಯವು ಲಸಿಕೆ ಕೊರತೆ ಎದುರಿಸುತ್ತಿದೆ. ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸುವಂತೆ ರಾಜ್ಯ ಸರ್ಕಾರ ಕೋರಿಕೆ ಸಲ್ಲಿಸಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ತಿಳಿಸಿದ್ದಾರೆ.
ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಕೋಯಿಕೋಡ್ ಮತ್ತು ಕಣ್ಣೂರು ಜಿಲ್ಲೆಗಳು ಲಸಿಕೆ ಕೊರತೆ ಎದುರಿಸುತ್ತಿವೆ. ರಾಜ್ಯಕ್ಕೆ ಮೀಸಲಾದ ಲಸಿಕೆಯಲ್ಲಿ 1.4 ಲಕ್ಷ ಡೋಸ್ಗಳು ಮಾತ್ರ ಉಳಿದಿವೆ. ನಾವು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಜಾರ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಎಲ್ಲ ಜಿಲ್ಲೆಗಳಲ್ಲಿ ಕೋವ್ಯಾಕ್ಸಿನ್ ಸೀಮಿತ ದಾಸ್ತಾನು ಇದೆ. ಆದರೆ, ಕೋವ್ಯಾಕ್ಸಿನ್ ತೆಗೆದುಕೊಳ್ಳಲು ಅನೇಕ ಜನರು ಹಿಂಜರಿಯುತ್ತಿದ್ದಾರೆ. ದೇಶಿಯ ಲಸಿಕೆಗಳನ್ನು ಹಾಕಿಸಿಕೊಳ್ಳಲು ಚಿಂತಿಸಬೇಕಾಗಿಲ್ಲ. ಎರಡೂ ಲಸಿಕೆಗಳು ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿವೆ ಎಂದು ಅವರು ಹೇಳಿದರು.
ಗುರುವಾರ ಒಂದೇ ದಿನದಲ್ಲಿ ರಾಜ್ಯವು ಮತ್ತೊಮ್ಮೆ 30,000ಕ್ಕೂ ಹೆಚ್ಚು ಹೊಸ ಸೋಂಕುಗಳಿಗೆ ಸಾಕ್ಷಿಯಾಗಿತ್ತು. 188 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೇರಳದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳು 41 ಲಕ್ಷ ಗಡಿ ದಾಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.