ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಆಪ್ತ ಕಾರ್ಯದರ್ಶಿಯ ಪತ್ನಿಯನ್ನು ಕಣ್ಣೂರು ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಹುದ್ದೆಗೆ ಮಾಡಿರುವ ಆಯ್ಕೆಯನ್ನು ಕೇರಳ ಹೈಕೋರ್ಟ್ ಸೋಮವಾರ ತಡೆಹಿಡಿದಿದೆ.
ಆಯ್ಕೆಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಜೋಸೆಫ್ ಸ್ಕಾರಿಯಾ ಅವರು ಪ್ರಿಯಾ ವರ್ಗೀಸ್ ಅವರ ಆಯ್ಕೆಯನ್ನು ತಡೆಹಿಡಿಯುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಅವರಿಗೆ ಹತ್ತಿರ ಇರುವ ಕಾರಣಕ್ಕೆ ಪ್ರಿಯಾ ಅವರಿಗೆ ಸಂದರ್ಶನ ಮಂಡಳಿ ಹೆಚ್ಚು ಅಂಕ ನೀಡಿದೆ ಎಂದು ಜೋಸೆಫ್ ಅವರು ಅರ್ಜಿಯಲ್ಲಿ ಆರೋಪಿಸಿದ್ದರು.
ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಮತ್ತು ಮಾಜಿ ಸಂಸದ ಕೆ.ಕೆ. ರಾಜೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ಅವರ ಆಯ್ಕೆಯು ಸ್ವಜನ ಪಕ್ಷಪಾತದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ಜತೆಗೆ ಪ್ರಿಯಾ ಅವರಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೇಳಿರುವಂತೆ ಪಾಠ ಮಾಡಿರುವ ಅನುಭವವೂ ಇಲ್ಲ ಎಂದೂ ಆರೋಪಿಸಲಾಗಿದೆ. ಕೋರ್ಟ್ ಆದೇಶವು ಸಿಪಿಎಂ ನೇತೃತ್ವದ ಕೇರಳ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.