ADVERTISEMENT

ಅಲೀಗಡ ಕಳ್ಳಬಟ್ಟಿ ಪ್ರಕರಣ: ಪ್ರಮುಖ ಆರೋಪಿ ಬಂಧನ

ಪಿಟಿಐ
Published 6 ಜೂನ್ 2021, 7:10 IST
Last Updated 6 ಜೂನ್ 2021, 7:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೊಯಿಡಾ/ಅಲೀಗಡ: ‘ಅಲೀಗಡ ಕಳ್ಳಬಟ್ಟಿ ಪ್ರಕರಣದ ಪ್ರಮುಖ ಆರೋಪಿಯನ್ನು ಭಾನುವಾರ ಮುಂಜಾನೆ ಬಂಧಿಸಲಾಗಿದೆ. ಕಳೆದ ತಿಂಗಳು ಸಂಭವಿಸಿದ ಈ ದುರಂತದಲ್ಲಿ 35 ಮಂದಿ ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಉತ್ತರ ಪ್ರದೇಶದ ಬುಲಂದ್‌ಶಹರ್ ಗಡಿಯಲ್ಲಿ ಆರೋಪಿ ರಿಶಿ ಶರ್ಮಾನನ್ನು ಬಂಧಿಸಲಾಗಿದೆ. ಈತನ ತಲೆಗೆ ಸರ್ಕಾರವು ₹1 ಲಕ್ಷ ಬಹುಮಾನ ಘೋಷಿಸಿತ್ತು’ ಎಂದು ಅಲೀಗಡದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಕಲಾನಿಧಿ ನೈಥಾನಿ ಅವರು ಹೇಳಿದರು.

‘ಅಲೀಗಡದಲ್ಲಿ ಇತ್ತೀಚೆಗೆ ಎರಡು ವಿಭಿನ್ನ ಸಂದರ್ಭಗಳಲ್ಲಿ ಕಳ್ಳಬಟ್ಟಿ ಸೇವಿಸಿ, ಸುಮಾರು 50 ಮಂದಿ ಮೃತಪಟ್ಟಿದ್ದರು. ಇನ್ನೂ 50 ಮಂದಿಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಹಾಗಾಗಿ ಮೃತರ ಸಂಖ್ಯೆ 100ಕ್ಕೆ ತಲುಪುವ ಸಾಧ್ಯತೆಗಳಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಈ ಹಿಂದೆ, ಆರೋಪಿಗಳಾದ ವಿಪಿನ್‌ ಶರ್ಮಾ ಮತ್ತು ರಿಷಿ ಶರ್ಮಾನ ಸಹೋದರ ಮನೀಶ್‌ ಶರ್ಮಾನನ್ನು ‍ಪೊಲೀಸರು ಬಂಧಿಸಿದ್ದರು.

‘ಕಳ್ಳಬಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಈವರೆಗೆ ಅಲೀಗಡದಲ್ಲಿ 17 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 61 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರು ರಾಜ್ಯಗಳಲ್ಲಿ ಪೊಲೀಸರ ತಂಡಗಳು ತನಿಖೆ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ’ ಎಂದು ಜಿಲ್ಲಾ ಪೊಲೀಸರ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.