ADVERTISEMENT

ಚೀನಾದಿಂದ ಐದು ಬೇರೆ ಬೇರೆ ವಿವರಣೆ: ಎಸ್‌.ಜೈಶಂಕರ್‌

ಪಿಟಿಐ
Published 9 ಡಿಸೆಂಬರ್ 2020, 15:41 IST
Last Updated 9 ಡಿಸೆಂಬರ್ 2020, 15:41 IST
ಜೈಶಂಕರ್‌
ಜೈಶಂಕರ್‌   

ನವದೆಹಲಿ: ‘ವಾಸ್ತವ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ಹೆಚ್ಚುವರಿ ಸೇನೆಯನ್ನು ನಿಯೋಜಿಸಿರುವುದಕ್ಕೆ ಚೀನಾವು ಭಾರತಕ್ಕೆ ‘ಐದು ಬೇರೆ ಬೇರೆ ವಿವರಣೆ’ಯನ್ನು ನೀಡಿದ್ದು, ದ್ವಿಪಕ್ಷೀಯ ಒಪ್ಪಂದ ಉಲ್ಲಂಘನೆಯಿಂದ 30–40 ವರ್ಷಗಳಲ್ಲೇ ಎರಡೂ ರಾಷ್ಟ್ರಗಳ ಸಂಬಂಧವು ತೀವ್ರವಾಗಿ ಹಾನಿಯಾಗಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಬುಧವಾರ ಹೇಳಿದರು.

ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಆಯೋಜಿಸಿದ್ದ ಆನ್‌ಲೈನ್‌ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರ ಜೈಶಂಕರ್‌, ‘ಚೀನಾ ಜೊತೆಗೆ ಭಾರತದ ಸಂಬಂಧಕ್ಕೆ ಈ ವರ್ಷ ತೀವ್ರ ಹಾನಿಯಾಗಿದೆ. ಸಂಬಂಧವನ್ನು ಮುಂದುವರಿಸುವುದಕ್ಕೆ ಎಲ್‌ಎಸಿಯಲ್ಲಿ ಶಾಂತಿ ಕಾಪಾಡುವುದೇ ಮೂಲ ಎಂದು ಭಾರತವು ಚೀನಾಗೆ ಸ್ಪಷ್ಟಪಡಿಸಿದೆ. ಪ್ರಸ್ತುತ ಗಡಿಯಲ್ಲಿ ಉದ್ಭವವಾಗಿರುವ ಸಂಘರ್ಷದ ಸ್ಥಿತಿಯನ್ನು ಇಟ್ಟುಕೊಂಡು, ಜೀವನ ಹಾಗೂ ಇತರೆ ಕ್ಷೇತ್ರದ ಚಟುವಟಿಕೆಗಳಲ್ಲಿ ಮುಂದುವರಿಯೋಣ ಎಂದರೆ ಆಗುವುದಿಲ್ಲ. ಇದು ಅವಾಸ್ತವಿಕೆ’ ಎಂದರು.

‘ಎಲ್‌ಎಸಿಯಲ್ಲಿ ಶಾಂತಿ ಕಾಪಾಡುವ ವಿಚಾರವಾಗಿ ಎರಡೂ ರಾಷ್ಟ್ರಗಳು ಹಲವು ಒಪ್ಪಂದಕ್ಕೆ ಸಹಿ ಹಾಕಿದ ಕಾರಣ, ಚೀನಾದೊಂದಿಗೆ ವಾಣಿಜ್ಯ, ಪ್ರವಾಸ ಹಾಗೂ ಇತರೆ ಕ್ಷೇತ್ರಗಳಲ್ಲಿನ ಸಂಬಂಧವು ಮುಂದುವರಿದಿತ್ತು. ಪೂರ್ವ ಲಡಾಖ್‌ನಲ್ಲಿ ನಡೆದ ಘಟನೆ ರಾಷ್ಟ್ರದ ಭಾವನೆಯನ್ನೇ ಬದಲಾಯಿಸಿತು. ಯುದ್ಧಕ್ಕೆ ಸಜ್ಜಾದ ಸಾವಿರಾರು ಸೈನಿಕರನ್ನು ಚೀನಾ ಎಲ್‌ಎಸಿಗೆ ತಂದು ನಿಲ್ಲಿಸಿದೆ. ಇದರಿಂದಾಗಿ ಸ್ವಾಭಾವಿಕವಾಗಿ ಸಂಬಂಧಕ್ಕೆ ಭಂಗ ಉಂಟಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.