ನವದೆಹಲಿ: ‘ಕಾಶ್ಮೀರದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಹತ್ಯೆಗಳಿಂದಾಗಿ ಕಣಿವೆ ಯಲ್ಲಿ ವಾಸವಿರುವ ಸಮುದಾಯದ ಜನರಲ್ಲಿ ಭಯ, ಆತಂಕ ಮತ್ತು ಅಭದ್ರತೆ ಕಾಡುತ್ತಿದೆ’ ಎಂದು ವಕೀಲ ರೊಬ್ಬರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಇತರ
ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ವಕೀಲ ವಿನೀತ್ ಜಿಂದಾಲ್ ಅವರು ತಾವು ಬರೆದಿರುವ ಪತ್ರದಲ್ಲಿ, ‘ಕಾಶ್ಮೀರದಲ್ಲಿನ ಹಿಂದೂ ಅಲ್ಪಸಂಖ್ಯಾತರಿಗೆ ತಕ್ಷಣದಿಂದಲೇ ಸೂಕ್ತ ಭದ್ರತೆ ಒದಗಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ’ ಮನವಿ ಮಾಡಿದ್ದಾರೆ.
‘ಕಾಶ್ಮೀರದಲ್ಲಿನ ಅಲ್ಪಸಂಖ್ಯಾತ ಸಮುದಾಯದವರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಬೇಕಿದೆ. ಇದಕ್ಕೆ ಅಗತ್ಯವಿರುವ ವ್ಯವಸ್ಥೆ ರಚಿಸಲು ಮತ್ತು ನಿರ್ವಹಿಸಲು ವಿಶೇಷ ಘಟಕವನ್ನು ಸ್ಥಾಪಿಸಲು ಸೂಚಿಸುವಂತೆ’ ಕೋರಿದ್ದಾರೆ.
‘ಇತ್ತೀಚೆಗೆ ನಡೆದ ಹಿಂದೂ ಅಲ್ಪಸಂಖ್ಯಾತರ ಹತ್ಯೆಗಳ ಕುರಿತುರಾಷ್ಟ್ರೀಯ ಭದ್ರತಾ ಏಜೆನ್ಸಿಯಿಂದ ತನಿಖೆ ನಡೆಸಬೇಕು. ಈ ಹತ್ಯೆಗಳ ಸಂತ್ರಸ್ತರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲು ನಿರ್ದೇಶಿಸ ಬೇಕು’ ಎಂದು ಮನವಿ ಮಾಡಿದ್ದಾರೆ.
ಕುಲ್ಗಾಮ್ನ ಶಾಲೆಯಲ್ಲಿ ಮಂಗಳ ವಾರ ನಡೆದ ಶಿಕ್ಷಕಿ ರಜನಿ ಬಾಲಾ ಅವರ ಹತ್ಯೆಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ವಕೀಲರು, ‘ಇದು ಕಾಶ್ಮೀರದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಏಳನೇ ಕೊಲೆ. ಇದಕ್ಕೂ ಮುನ್ನ ಉಗ್ರರು ಮೂವರು ಪೊಲೀಸರು ಮತ್ತು ಮೂವರು ನಾಗರಿಕರನ್ನು ಕೊಂದಿದ್ದರು’ ಎಂದು ತಿಳಿಸಿದ್ದಾರೆ.
‘ಕಾಶ್ಮೀರದಲ್ಲಿ ನಡೆದ ಅಲ್ಪಸಂಖ್ಯಾ ತರ ಹತ್ಯೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ 2021ರ ಅ. 9ರಂದು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿಯವರೆಗೆ ಗಂಭೀರವಾಗಿ ಪರಿಗಣಿ ಸದ ಕಾರಣ ಆ ಪರಿಸ್ಥಿತಿ ಇನ್ನೂ ಮುಂದು ವರಿದಿದೆ’ ಎಂದೂ ವಿನೀತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.