ADVERTISEMENT

ಎಲ್‌ಜೆಪಿ: ಪರಸ್ಪರರನ್ನು ಉಚ್ಚಾಟಿಸಿದ ಬಣಗಳು

ಪಿಟಿಐ
Published 15 ಜೂನ್ 2021, 19:31 IST
Last Updated 15 ಜೂನ್ 2021, 19:31 IST

ನವದೆಹಲಿ: ಎಲ್‌ಜೆಪಿಯ ಚಿರಾಗ್ ಪಾಸ್ವಾನ್‌ ಬಣ ಹಾಗೂ ಪಶುಪತಿ ಕುಮಾರ್‌ ಪಾರಸ್‌ ಬಣಗಳು ಮಂಗಳವಾರ ಪರಸ್ಪರರನ್ನು ಉಚ್ಚಾಟಿಸುವ ಮೂಲಕ ಪಕ್ಷದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿವೆ.

ಚಿರಾಗ್‌ ಪಾಸ್ವಾನ್‌ ಬಣವು ರಾಷ್ಟ್ರೀಯ ಕಾರ್ಯಕಾರಿಣಿಯನ್ನು ನಡೆಸಿ, ಐವರು ಬಂಡಾಯ ಸಂಸದರನ್ನು ಉಚ್ಚಾಟಿಸುವ ತೀರ್ಮಾನ ಕೈಗೊಂ
ಡಿತು. ಇನ್ನೊಂದೆಡೆ ಪಾರಸ್‌ ನೇತೃತ್ವದ ಬಣವು ಪಾಸ್ವಾನ್‌ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿದೆ. ತಮ್ಮದೇ ನಿಜವಾದ ಲೋಕ ಜನಶಕ್ತಿ ಪಕ್ಷ ಎಂದು ಎರಡೂ ಬಣಗಳು ವಾದಿಸಿವೆ.

ಪಕ್ಷದ ಆರು ಮಂದಿ ಸಂಸದರಲ್ಲಿ ಐವರು ಪಾರಸ್‌ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಚಿರಾಗ್‌ ಅವರು ಮಂಗಳವಾರ ವರ್ಚುವಲ್‌ ಮಾಧ್ಯಮದಲ್ಲಿ ಪಕ್ಷದ ಸಭೆ ಆಯೋಜಿಸಿದ್ದು, 76ರಲ್ಲಿ 41 ಮಂದಿ ಸದಸ್ಯರು ಆ ಸಭೆಯಲ್ಲಿ ಪಾಲ್ಗೊಂಡಿ
ದ್ದರು. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಐವರು ಸಂಸದರನ್ನು ಉಚ್ಚಾಟಿ
ಸಲು ಸಭೆಯಲ್ಲಿ ಅವಿರೋಧವಾಗಿ ತೀರ್ಮಾನಿಸಲಾಗಿದೆ ಎಂದು ಪಕ್ಷದ ಬಿಹಾರ ಘಟಕದ ಕಾರ್ಯನಿರ್ವಾಹಕ ಅಧ್ಯಕ್ಷ ರಾಜು ತಿವಾರಿ ತಿಳಿಸಿದ್ದಾರೆ.

ADVERTISEMENT

ಇನ್ನೊಂದೆಡೆ, ಸಂಸದರೂ ಆಗಿರುವ ಚಿರಾಗ್‌ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲು ತುರ್ತಾಗಿ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎಂಬ ನಿಯಮಾನುಸಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಐದು ದಿನದೊಳಗೆ ಪಕ್ಷದ ರಾಷ್ಟ್ರೀಯ ಮಂಡಳಿಯ ಸಭೆ ಕರೆಯಲಾಗುವುದು ಎಂದು ಪಾರಸ್‌ ಬಣ ತಿಳಿಸಿದೆ.

ಈ ಬೆಳವಣಿಗೆಗಳ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಪಾಸ್ವಾನ್‌, ‘ಪಕ್ಷ ತಾಯಿ ಇದ್ದಂತೆ. ಅದಕ್ಕೆ ದ್ರೋಹ ಬಗೆಯಬಾರದು’ ಎಂದಿದ್ದಾರೆ.

ಕಳೆದ ಮಾರ್ಚ್‌ 29ರಂದು ಚಿಕ್ಕಪ್ಪ ಪಾರಸ್‌ ಅವರಿಗೆ ತಾವು ಬರೆದಿದ್ದ ಪತ್ರ
ವೊಂದನ್ನು ಚಿರಾಗ್‌ ಅವರು ಟ್ವಿಟರ್‌
ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಪಾರಸ್‌ ಅವರು ಪಕ್ಷದ ನೀತಿಯನ್ನು ಉಲ್ಲಂಘಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಕುಟುಂಬ ಹಾಗೂ ಪಕ್ಷಕ್ಕೆ ನಿಷ್ಠೆಯನ್ನು ಪ್ರದರ್ಶಿಸುವಂತೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.