ADVERTISEMENT

ಒಬ್ಬರ ಜನಪ್ರಿಯತೆಯೇ ಬಂಡವಾಳ

ಪುರಿ ಘರ್ವಾಲ್‌ನಲ್ಲಿ ಬಿಜೆಪಿಯ ಖಂಡೂರಿ ಮಗ ಕಾಂಗ್ರೆಸ್‌ನಿಂದ ಸ್ಪರ್ಧೆ

ಪಿಟಿಐ
Published 19 ಮಾರ್ಚ್ 2019, 19:53 IST
Last Updated 19 ಮಾರ್ಚ್ 2019, 19:53 IST
ಮನೀಶ್‌
ಮನೀಶ್‌   

ಡೆಹ್ರಾಡೂನ್‌: ಉತ್ತರಾಖಂಡದ ಪುರಿ ಘರ್ವಾಲ್‌ ಕ್ಷೇತ್ರ ಈ ಬಾರಿ ವಿಶಿಷ್ಟ ಹಣಾಹಣಿಗೆ ಸಾಕ್ಷಿಯಾಗಬಹುದಾದ ಎಲ್ಲ ಲಕ್ಷಣಗಳೂ ಇವೆ.

ಬಿಜೆಪಿಯ ಹಿರಿಯ ಮುಖಂಡ ಬಿ.ಸಿ.ಖಂಡೂರಿ ಅವರ ಮಗ ಮನೀಶ್‌ ಖಂಡೂರಿ ಅವರನ್ನು ಈ ಕ್ಷೇತ್ರದಿಂದ ಕಾಂಗ್ರೆಸ್‌ ಕಣಕ್ಕಿಳಿಸುವುದು ಬಹುತೇಕ ಖಚಿತ.

ಮನೀಶ್‌ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಶನಿವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ADVERTISEMENT

ಮನೀಶ್‌ ಅವರೇ ಅಭ್ಯರ್ಥಿ ಎಂದು ಕಾಂಗ್ರೆಸ್‌ ಘೋಷಿಸಿಲ್ಲ. ಆದರೆ, ಅವರೇ ಅಭ್ಯರ್ಥಿ ಎಂಬ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಅವರು ಅಭ್ಯರ್ಥಿಯಾದರೆ ಸ್ಪರ್ಧೆ ಆಸಕ್ತಿಕರವಾಗುವುದರಲ್ಲಿ ಅನುಮಾನ ಇಲ್ಲ.

ತಂದೆ ಬಿ.ಸಿ. ಖಂಡೂರಿ ಅವರ ಜನಪ್ರಿಯತೆಯನ್ನೇ ನೆಚ್ಚಿಕೊಂಡು ಮನೀಶ್ ಸ್ಪರ್ಧಿಸಲಿದ್ದಾರೆ. ಬಿ.ಸಿ.ಖಂಡೂರಿ ತಮ್ಮವರು ಎಂಬುದನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣಾ ಪ್ರಚಾರ ನಡೆಸಬಹುದು. ಈ ಸನ್ನಿವೇಶ ಸ್ವತಃ ಬಿ.ಸಿ.ಖಂಡೂರಿ ಅವರಲ್ಲಿಯೂ ದ್ವಂದ್ವಕ್ಕೆ ಕಾರಣ ಆಗಬಹುದು.

ಮಗ ಕಾಂಗ್ರೆಸ್‌ ಪಕ್ಷ ಸೇರಿರುವುದು ಆತನ ಸ್ವಂತ ನಿರ್ಧಾರ, ತಾವು ಬಿಜೆಪಿಗೆ ನಿಷ್ಠರಾಗಿಯೇ ಇರುವುದಾಗಿ ಬಿ.ಸಿ.ಖಂಡೂರಿ ಹೇಳಿದ್ದಾರೆ.

ಆದರೆ, ಮಗನ ಪರವಾಗಿ ಪ್ರಚಾರ ಮಾಡಬೇಕೇ, ಬಿಜೆಪಿಗಾಗಿ ಕೆಲಸ ಮಾಡಬೇಕೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅವರಿಗೆ ಸುಲಭವಲ್ಲ. ಬಿ.ಸಿ. ಖಂಡೂರಿ ಅವರು ಈ ಕ್ಷೇತ್ರದಿಂದ ಹಲವು ಬಾರಿ ಗೆದ್ದಿದ್ದಾರೆ.

ನಿವೃತ್ತ ಮೇಜರ್‌ ಜನರಲ್‌ ಖಂಡೂರಿ ಅವರು ಪ್ರಾಮಾಣಿಕತೆ ಮತ್ತು ಶಿಸ್ತಿಗೆ ಹೆಸರಾದವರು. ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸಚಿವರಾಗಿ ಮಾಡಿದ ಕೆಲಸದ ಬಗ್ಗೆ ಜನರಲ್ಲಿ ಅಭಿಮಾನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.