ADVERTISEMENT

ಮಹಾರಾಷ್ಟ್ರ‌: ಬಸ್‌ ನಿರ್ವಾಹಕರ ಸಮವಸ್ತ್ರದಲ್ಲಿ ಶೀಘ್ರ ಕ್ಯಾಮೆರಾ

ಪಿಟಿಐ
Published 6 ಡಿಸೆಂಬರ್ 2020, 6:10 IST
Last Updated 6 ಡಿಸೆಂಬರ್ 2020, 6:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಾಬಾದ್‌: ಮಹಾರಾಷ್ಟ್ರದ ಔರಂಗಾಬಾದ್‌ ನಗರದ ಬಸ್‌ ನಿರ್ವಾಹಕರು ಮತ್ತು ಟಿಕೆಟ್‌ ಇನ್‌ಸ್ಪೆಕ್ಟರ್‌ಗಳು ತಮ್ಮ ಸಮವಸ್ತ್ರದಲ್ಲಿ ಕ್ಯಾಮೆರಾಗಳನ್ನು ಶೀಘ್ರದಲ್ಲಿ ಧರಿಸಲಿದ್ದಾರೆ. ಈ ಮೂಲಕ ಸಾರಿಗೆ ಸಮಯದಲ್ಲಿ ಪ್ರಯಾಣಿಕರ ವರ್ತನೆ ಮತ್ತು ಇತರ ಚಟುವಟಿಕೆಗಳನ್ನು ಗಮನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ತವ್ಯದಲ್ಲಿ ನಿರತರಾಗಿದ್ದಾಗ ಕೆಲವು ಪ್ರಯಾಣಿಕರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಕೆಲವು ನಿರ್ವಾಹಕಿಯರು ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಔರಂಗಾಬಾದ್‌ ಸ್ಮಾರ್ಟ್‌ ಸಿಟಿ ಅಭಿವೃದ್ಧಿ ನಿಗಮವು(ಎಎಸ್‌ಸಿಡಿಸಿಎಲ್‌) ಬಸ್ ನಿರ್ವಾಹಕರು ಮತ್ತು ಟಿಕೆಟ್‌ ಇನ್‌ಸ್ಪೆಕ್ಟರ್‌ಗಳ ಅಂಗಿಯ ಮುಂದಿನ ಜೇಬಿನಲ್ಲಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಇದು ಬಸ್‌ನಲ್ಲಿ ನಡೆಯುವ ಚಟುವಟಿಕೆಗಳನ್ನು ದಾಖಲಿಸಲಿದೆ ಎಂದು ಎಎಸ್‌ಸಿಡಿಸಿಎಲ್‌ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

ಮಾಜಿ ಯೋಧರನ್ನು ಲೈನ್‌ ಇನ್‌ಸ್ಪೆಕ್ಟರ್‌ಗಳಾಗಿ ಎಎಸ್‌ಸಿಡಿಸಿಎಲ್‌ ನೇಮಿಸಲಿದ್ದು, ಇವರು ಟಿಕೆಟ್‌ ಪರಿಶೀಲನೆ ಮತ್ತು ಬಸ್‌ನಲ್ಲಿ ನಡೆಯುವ ಚಟುವಟಿಕೆ ಮೇಲೆ ಗಮನವಹಿಸಲಿದ್ದಾರೆ. ಅಲ್ಲದೆ ಅವರು ಪ್ರಯಾಣಿಕರ ಸುರಕ್ಷತೆ ಬಗ್ಗೆಯೂ ಕಾಳಜಿ ವಹಿಸಲಿದ್ದಾರೆ. ಬಳಿಕ ಪ್ರಯಾಣಿಕರ ಪ್ರತಿಕ್ರಿಯೆಗಳನ್ನು ಅಧಿಕಾರಿಗಳಿಗೆ ವರದಿ ಮಾಡಲಿದ್ದಾರೆ.

ಎಎಸ್‌ಸಿಡಿಸಿಎಲ್ 100 ಬಸ್‌ಗಳನ್ನು ಹೊಂದಿದ್ದು, ಅವುಗಳಲ್ಲಿಪ್ರಸ್ತುತ 29 ಬಸ್‌ಗಳು ನಗರದ 12 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಒಂದು ದಿನದಲ್ಲಿ ಸುಮಾರು 5,000 ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.