ADVERTISEMENT

ಭ್ರಷ್ಟಾಚಾರ: ಬಂಧನವಾಗಿ ತಿಂಗಳುಗಳ ನಂತರ ದೇಶಮುಖ್ ಆಪ್ತ ಕಾರ್ಯದರ್ಶಿ ಅಮಾನತು

ಪಿಟಿಐ
Published 17 ಸೆಪ್ಟೆಂಬರ್ 2021, 8:29 IST
Last Updated 17 ಸೆಪ್ಟೆಂಬರ್ 2021, 8:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೂರು ತಿಂಗಳ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೇಣಿಯ ಅಧಿಕಾರಿ ಸಂಜೀವ್ ಪಲಾಂಡೆ ಅವರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ. ಅವರು ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು.

ಜೂನ್ 26ರಂದು ಪಲಾಂಡೆ ಅವರನ್ನು ಬಂಧಿಸಿ, ಅಕ್ರಮ ಹಣ ವರ್ಗಾವಣೆ ನಿಯಂತ್ರಣ (ಪಿಎಂಎಲ್‌ಎ) ಕಾಯ್ದೆಯಡಿ ತನಿಖೆ ನಡೆಸಲಾಗುತ್ತಿದೆ.

ಪಲಾಂಡೆ ಅವರನ್ನು ಸರ್ಕಾರ ಗುರುವಾರ ಅಮಾನತುಗೊಳಿಸಿ ಆದೇಶಿಸಿದೆ. ಈ ಆದೇಶದ ಪ್ರಕಾರ, ‘ಪಲಾಂಡೆ ಅವರನ್ನು ಜುಲೈ 7ರಂದು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಅವರು 48 ಗಂಟೆಗಳಿಗೂ ಹೆಚ್ಚು ಕಾಲ ಇ.ಡಿ. ವಶದಲ್ಲಿದ್ದರು’ ಎಂದು ತಿಳಿಸಲಾಗಿದೆ. ಮಹಾರಾಷ್ಟ್ರ ನಾಗರಿಕ ಸೇವಾ ನಿಯಮಗಳ ಪ್ರಕಾರ, ಪಲಾಂಡೆ ಅವರನ್ನು ಜೂನ್ 26ರಿಂದ ಮುಂದಿನ ಆದೇಶದವರೆಗೂ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗಿದೆ.

ADVERTISEMENT

‘ಈ ಅಮಾನತು ಅವಧಿಯಲ್ಲಿ ಪಲಾಂಡೆ ಅವರು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಮುಂಬೈ ನಗರ ಅಥವಾ ಜಿಲ್ಲೆಯನ್ನು ಬಿಡುವಂತಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಲಾಂಡೆಯ ಬಂಧನ ಮತ್ತು ಕಸ್ಟಡಿಯ ಬಗ್ಗೆ ಆಗಸ್ಟ್ 31 ರಂದು ಪತ್ರದ ಮೂಲಕ ಇ.ಡಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್ ವಿರುದ್ದದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲಾಂಡೆ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.