ADVERTISEMENT

ಲಾಲು ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ: ಸಿಬಿಐ ವಿರುದ್ಧ ಕಿಡಿ

ಪಿಟಿಐ
Published 26 ಡಿಸೆಂಬರ್ 2022, 11:21 IST
Last Updated 26 ಡಿಸೆಂಬರ್ 2022, 11:21 IST
ಲಾಲು ಪ್ರಸಾದ್‌ 
ಲಾಲು ಪ್ರಸಾದ್‌    

ಪಟ್ನಾ (ಪಿಟಿಐ): ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ ನೀಡಲು ಸಿಬಿಐ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಬಿಐ ಹೋದ ವರ್ಷ ಪ್ರಕರಣ ಅಂತ್ಯಗೊಳಿಸಿತ್ತು. ಆದರೆ ಈಗ ಪುನಃ ತನಿಖೆ ನಡೆಸಲು ನಿರ್ಧರಿಸಿದೆ.ಇದು ಬಿಹಾರದ ಆಡಳಿತಾರೂಢ ಮಹಾಘಟಬಂಧನ ಸರ್ಕಾರದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಲಾಲು ವಿರುದ್ಧ ಸಿಬಿಐ ಹಲವು ಪ್ರಕರಣಗಳನ್ನು ದಾಖಲಿಸಿದೆ. ಎಲ್ಲಾ ಪ್ರಕರಣಗಳಲ್ಲೂ ಅವರಿಗೆ ಕ್ಲೀನ್‌ಚಿಟ್‌ ದೊರೆಯುವ ವಿಶ್ವಾಸ ಇದೆ’ ಎಂದು ಆರ್‌ಜೆಡಿ ನಾಯಕ ವಿಜಯ್‌ ಪ್ರಕಾಶ್‌ ಹೇಳಿದ್ದಾರೆ.

ADVERTISEMENT

‘ಬಿಜೆಪಿಯನ್ನು ವಿರೋಧಿಸುವವರ ವಿರುದ್ಧ ಸಿಬಿಐ, ತನಿಖೆಯ ಅಸ್ತ್ರ ಪ್ರಯೋಗಿಸುತ್ತಿರುವುದು ಅಚ್ಚರಿ ಮೂಡಿಸಿದೆ. ತನಿಖಾ ಸಂಸ್ಥೆಯು ಬಿಜೆಪಿ ನಾಯಕರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ. ವಿರೋಧ ಪಕ್ಷಗಳ ನಾಯಕರ ವರ್ಚಸ್ಸು ಕೆಡಿಸಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಬಿಹಾರದ ಹಣಕಾಸು ಸಚಿವ ವಿಜಯ್‌ಕುಮಾರ್‌ ಚೌಧರಿ ದೂರಿದ್ದಾರೆ.

‘ಲಾಲು ಅವರ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ಈಗಿನ ಸುದ್ದಿ ಆತಂಕ ಪಡುವಂತಹದ್ದೇನೂ ಅಲ್ಲ’ ಎಂದಿದ್ದಾರೆ.

ಬಹುಕೋಟಿ ಮೇವು ಹಗರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಅವರು ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಸಿಬಿಐ ಮರುಜೀವ ನೀಡಿರುವ ಪ್ರಕರಣದಲ್ಲಿ ಲಾಲು ಪುತ್ರ ತೇಜಸ್ವಿ ಯಾದವ್‌ ಹಾಗೂ ಪುತ್ರಿಯರಾದರಾಗಿಣಿ ಮತ್ತು ಚಂದ್ರಾ ಅವರೂ ಆರೋಪಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.