ಮಾಣಿಕ್ರಾವ್ ಕೊಕಾಟೆ
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇತ್ತೀಚೆಗೆ ಮೊಬೈಲ್ನಲ್ಲಿ ಆನ್ಲೈನ್ ರಮ್ಮಿ ಆಟವಾಡಿ ವಿವಾದಕ್ಕೆ ಒಳಗಾಗಿದ್ದ ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕರಾವ್ ಕೊಕಾಟೆ ಅವರ ಖಾತೆಯನ್ನು ಬದಲಾಯಿಸಲಾಗಿದೆ.
ಗುರುವಾರ ರಾತ್ರಿ ನಡೆದ ಸಂಪುಟ ಪುನರ್ ರಚನೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮಾಣಿಕರಾವ್ ಕೊಕಾಟೆ ಅವರಿಗೆ ಕೃಷಿ ಖಾತೆ ಬದಲಿಗೆ ಯುವ ಸಬಲೀಕರಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಯುವ ಸಬಲೀಕರಣ ಇಲಾಖೆಯ ಸಚಿವರಾಗಿದ್ದ ದತ್ತಾತ್ರೇಯ ಭರ್ಣೆ ಅವರಿಗೆ ಕೃಷಿ ಖಾತೆ ಒದಗಿಸಲಾಗಿದೆ.
ಈ ಇಬ್ಬರೂ ಸಚಿವರು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಶಾಸಕರಾಗಿದ್ದಾರೆ.
ಕಳೆದ ಜುಲೈ 20 ರಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಚರ್ಚೆ ವೇಳೆ ಕೊಕಾಟೆ ಅವರು ತಮ್ಮ ಮೊಬೈಲ್ನಲ್ಲಿ ರಮ್ಮಿ ಆಡಿದ್ದರು ಎಂದು ಆರೋಪಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರವಾಗಿತ್ತು.
ಕೊಕಾಟೆ ಅವರು ಅಧಿವೇಶನ ನಡೆಯುವಾಗ ಮೊಬೈಲ್ನಲ್ಲಿ ‘ರಮ್ಮಿ’ ಆಡುತ್ತಿದ್ದ ಬಗ್ಗೆ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ತನಿಖೆಗೂ ಅದೇಶಿಸಿದ್ದರು. ಆದರೆ, ತಾನು ಮೊಬೈಲ್ ನೋಡುವಾಗ ರಮ್ಮಿ ಜಾಹೀರಾತು ಬಂದಿತ್ತು ಎಂದು ಕೊಕಾಟೆ ಸ್ಪಷ್ಟನೆ ನೀಡಿದ್ದರು.
ಮಾಣಿಕರಾವ್ ಕೊಕಾಟೆ ಅವರನ್ನು ಸಂಪುಟದಿಂದ ಕೈಬಿಡುವಂತೆ ವಿಪಕ್ಷಗಳ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟ ಆಗ್ರಹಿಸಿತ್ತು. ಆದರೆ ಖಾತೆ ಮಾತ್ರ ಬದಲಾವಣೆ ಮಾಡಿ ಕೊಕಾಟೆ ಅವರಿಗೆ ಬಿಸಿ ಮುಟ್ಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.