ಭದ್ರತಾ ಪಡೆ
ಬಿಜಾಪುರ (ಛತ್ತೀಸಗಢ): ಛತ್ತೀಸಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟಾ ಬೆಟ್ಟಗಳ ಸುತ್ತಮುತ್ತಲಿನ ದಟ್ಟ ಅರಣ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳು 21 ದಿನಗಳ ಕಾಲ ನಡೆಸಿದ ಸಮಗ್ರ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಇದು ಮಾವೋವಾದಿ ಭೀತಿಯ ‘ಅಂತ್ಯದ ಆರಂಭ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಏಪ್ರಿಲ್ 21 ರಂದು ಪ್ರಾರಂಭವಾದ ಈ ಕಾರ್ಯಾಚರಣೆಯಲ್ಲಿ ನಮ್ಮ ಪಡೆಗಳು 31 ನಕ್ಸಲರ ಶವಗಳನ್ನು ವಶಪಡಿಸಿಕೊಂಡಿವೆ. ಇದರಲ್ಲಿ 28 ನಕ್ಸಲರ ಗುರುತು ಸಿಕ್ಕಿದೆ ಎಂದು ಸಿಆರ್ಪಿಎಫ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಮತ್ತು ಛತ್ತೀಸಗಢದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅರುಣ್ ದೇವ್ ಗೌತಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಒಬ್ಬೊಬ್ಬರ ತಲೆ ಮೇಲೆ ₹1.72 ಕೋಟಿ ಬಹುಮಾನ ಇದ್ದ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಅಲ್ಲದೆ, ಶಸ್ತ್ರಾಸ್ತ್ರಗಳು ಮತ್ತು ಕಚ್ಚಾ ಬಾಂಬುಗಳನ್ನು ತಯಾರಿಸಲು ನಕ್ಸಲರು ಬಳಸುತ್ತಿದ್ದ ನಾಲ್ಕು ತಾಂತ್ರಿಕ ಘಟಕಗಳನ್ನು ನಾಶಪಡಿಸಲಾಗಿದೆ’ ಎಂದು ಛತ್ತೀಸಗಢದ ಎಡಿಜಿಪಿ (ನಕ್ಸಲ್ ವಿರೋಧಿ ಕಾರ್ಯಾಚರಣೆಗಳು) ವಿವೇಕಾನಂದ ತಿಳಿಸಿದ್ದಾರೆ.
‘ನಿರಂತರ ಮತ್ತು ನಿರ್ದಯ ಕಾರ್ಯಾಚರಣೆಗಳ ಮೂಲಕ 2026ರ ಮಾರ್ಚ್ 31 ರೊಳಗೆ ನಕ್ಸಲ್ ಸಮಸ್ಯೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ’ ಎಂದು ಜಿ.ಪಿ. ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.