ADVERTISEMENT

ಮುಟ್ಟಾದ ವಿದ್ಯಾರ್ಥಿನಿಯರು ಶಾಲೆಯಲ್ಲಿ ಗಿಡ ನೆಡುವುದನ್ನು ತಡೆದ ಶಿಕ್ಷಕ!

ಪಿಟಿಐ
Published 27 ಜುಲೈ 2022, 14:13 IST
Last Updated 27 ಜುಲೈ 2022, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಸಿಕ್‌, ಮಹಾರಾಷ್ಟ್ರ: ‘ಮುಟ್ಟಾಗಿದ್ದೇವೆ ಎಂಬ ಕಾರಣಕ್ಕೆ ಶಿಕ್ಷಕರೊಬ್ಬರು ತನಗೆ ಹಾಗೂ ಇತರರಿಗೆ ಶಾಲಾ ಆವರಣದಲ್ಲಿ ಗಿಡ ನೆಡಲು ಬಿಡಲಿಲ್ಲ’ ಎಂದು ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಬುಡಕಟ್ಟು ಅಭಿವೃದ್ಧಿ ಇಲಾಖೆಗೆ (ಟಿಡಿಡಿ) ದೂರು ನೀಡಿದ್ದಾರೆ.

ಮುಟ್ಟಾಗಿರುವ ಹುಡುಗಿಯರು ಗಿಡ ನೆಟ್ಟರೆ ಅವು ಸುಟ್ಟು ಹೋಗುತ್ತವೆ. ಸರಿಯಾಗಿ ಬೆಳೆಯುವುದಿಲ್ಲ ಎಂದೂ ಶಿಕ್ಷಕ ತಮಗೆ ಹೇಳಿದ್ದಾಗಿ ವಿದ್ಯಾರ್ಥಿನಿ ದೂರಿದ್ದಾರೆ.

‘ತ್ರಯಂಬಕೇಶ್ವರ ತಾಲ್ಲೂಕಿನ ದೇವಗಾಂವ್‌ನಲ್ಲಿರುವ ಬಾಲಕಿಯರ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೂರು ಕೊಟ್ಟಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತದೆ. ದೂರು ನೀಡಿರುವ ವಿದ್ಯಾರ್ಥಿನಿ, ಆಕೆಯ ಸಹಪಾಠಿಗಳು, ಶಿಕ್ಷಕರು, ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಮೇಲ್ವಿಚಾರಕರ ಹೇಳಿಕೆಗಳನ್ನೂ ಪಡೆಯಲಾಗುತ್ತದೆ’ ಎಂದು ಟಿಡಿಡಿ ಹೆಚ್ಚುವರಿ ಆಯುಕ್ತ ಸಂದೀಪ್‌ ಗೊಲೇತ್‌ ಹೇಳಿದ್ದಾರೆ.

ADVERTISEMENT

ಹೋದ ವರ್ಷ ನೆಟ್ಟಿದ್ದ ಗಿಡವೊಂದು ಇನ್ನೂ ಸರಿಯಾಗಿ ಬೆಳೆದಿಲ್ಲ. ಮುಟ್ಟಾಗಿರುವವರು ಅದರ ಬಳಿ ಹೋಗಿದ್ದರಿಂದಲೇ ಹೀಗಾಗಿದೆ.ಮುಟ್ಟಾಗಿರುವ ಯಾರೂ ಇನ್ನು ಮುಂದೆ ಗಿಡಗಳ ಬಳಿ ಹೋಗಬಾರದು ಎಂದು ಶಿಕ್ಷಕರು ಸೂಚಿಸಿದ್ದಾಗಿ ವಿದ್ಯಾರ್ಥಿನಿ ತಿಳಿಸಿದ್ದಾರೆ.

‘ಶೇ 80ರಷ್ಟು ಅಂಕಗಳು ಶಾಲಾ ಆಡಳಿತದ ಕೈಯಲ್ಲಿವೆ. ನಿಮ್ಮನ್ನು ಉತ್ತೀರ್ಣ ಅಥವಾ ಅನುತ್ತೀರ್ಣಗೊಳಿಸುವ ಅಧಿಕಾರಿ ನಮಗಿದೆ ಎಂದು ಶಿಕ್ಷಕ ಹೇಳಿದ್ದರು. ಹೀಗಾಗಿ ವಿದ್ಯಾರ್ಥಿನಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಆರಂಭದಲ್ಲಿ ದೂರು ನೀಡಲೂ ಮುಂದಾಗಿರಲಿಲ್ಲ’ ಎಂದು ಶ್ರಮಜೀವಿ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಭಗವಾನ್‌ ಮಾಧೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.