ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ನ್ಯಾಷನಲ್ ಹೆರಾಲ್ಡ್’ ಹಗರಣಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸೋಮವಾರ ವಿಚಾರಣೆಗೆ ಒಳಪಡಿಸಿದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್ ಜಾರಿ ಮಾಡಿದ್ದ ಇ.ಡಿ. ಅಧಿಕಾರಿಗಳು, ಬೆಳಿಗ್ಗೆ 10.30ರಿಂದ ಸಂಜೆ 4.15ರವರೆಗೆ ಖರ್ಗೆ ಅವರ ವಿಚಾರಣೆ ನಡೆಸಿದರು.
ಪಕ್ಷದ ಹಿರಿಯ ನಾಯಕ ಮೋತಿಲಾಲ್ ವೋರಾ ಅವರ ನಿಧನದ ಬಳಿಕ ಖರ್ಗೆ ಅವರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನ ಕಾರ್ಯಕಾರಿ ಸ್ಥಾನಕ್ಕೆ ನೇಮಕವಾಗಿದ್ದರಿಂದ ಅವರ ಹೇಳಿಕೆ ಪಡೆಯಲಾಗಿದೆ ಎಂದು 2016ರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ. ಮೂಲಗಳು ಹೇಳಿವೆ.
ಗಾಂಧಿ ಕುಟುಂಬಕ್ಕೆ ಹತ್ತಿರವಾಗಿರುವ ಸುಮನ್ ದುಬೆ ಹಾಗೂ ಸ್ಯಾಮ್ ಪಿತ್ರೋಡಾ ಅವರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಜೆಎಲ್ ಸಂಸ್ಥೆಯನ್ನು, ‘ನಷ್ಟದಲ್ಲಿದೆ’ ಎಂಬ ಕಾರಣ ಮುಂದಿರಿಸಿ ಖರೀದಿ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ದೂರಿದ್ದರು. ಈ ಖರೀದಿಯ ಹಿಂದೆ ಅಕ್ರಮ ನಡೆದಿದೆ ಎಂದೂ ಆರೋಪಿಸಿದ್ದ ಅವರು ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.