ಕೊಲ್ಕತ್ತಾ: ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರು ಪ್ರಸ್ತಾಪಿಸಿರುವ 10 ಅಂಶಗಳನ್ನು ಕಿರಿಯ ವೈದ್ಯರು ಒಪ್ಪಿದ್ದು ಮುಷ್ಕರವನ್ನು ಅಂತ್ಯಗೊಳಿಸಿದ್ದಾರೆ.
ಜೂನ್ 11ರಂದು ಆರಂಭವಾದ ಕಿರಿಯ ವೈದ್ಯರ ಮುಷ್ಕರ ದೇಶಾದ್ಯಂತ ವ್ಯಾಪಿಸಿದ್ದು, ರೋಗಿಗಳಿಗೆ ಚಿಕಿತ್ಸೆ ದೊರೆಯದೇ ಸಮಸ್ಯೆ ಎದುರಾಗಿದೆ. ಪಶ್ಚಿಮ ಬಂಗಾಳದಲ್ಲಂತೂ ಸಮಸ್ಯೆ ಬಿಗಡಾಯಿಸಿತ್ತು. ಇದೇ ಹಿನ್ನೆಲೆಯಲ್ಲಿ ಇಂದು ಕಿರಿಯ ವೈದ್ಯರೊಂದಿಗೆ ಸಂಧಾನ ಸಭೆ ನಡೆಸಿದ ಮಮತಾ ಬ್ಯಾನರ್ಜಿ ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಗೆ 10 ಅಂಶಗಳನ್ನು ಪ್ರಸ್ತಾಪಿಸಿದರು.
ಕಿರಿಯ ವೈದ್ಯರ ಸಂಘದ 24 ಪ್ರತಿನಿಧಿಗಳು ಮಮತಾ ಬ್ಯಾನರ್ಜಿ ಅವರ ಈ ಸಭೆಯಲ್ಲಿ ಭಾಗವಹಿಸಿದ್ದರು. ವೈದ್ಯರು ಮತ್ತು ರೋಗಿಗಳ ನಡುವೆ ಸಮನ್ವಯಕ್ಕೆ ವ್ಯವಸ್ಥೆ ಕಲ್ಪಿಸುವುದು, ಆಸ್ಪತ್ರೆಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸುವುದು, ಆಸ್ಪತ್ರೆಯ ತುರ್ತು ಘಟಕಕ್ಕೆ ಬಂದು ಹೋಗುವ ರೋಗಿಗಳು ಮತ್ತು ಸಂಬಂಧಿಗಳ ದಾಖಲೀಕರಣದ ಕುರಿತು ಪ್ರಸ್ತಾಪಿಸಿದರು.
ಮಮತಾ ಬ್ಯಾನರ್ಜಿ ಅವರು ಪ್ರಸ್ತಾಪಿಸಿದ ಈ ಅಂಶಗಳೂ ಸೇರಿದಂತೆ ಒಟ್ಟು ಹತ್ತು ಅಂಶಗಳಿಗೆ ಕಿರಿಯ ವೈದ್ಯರು ಒಪ್ಪಿದ್ದಾರೆ. ಅದರಂತೆ ಅವರು ಮುಷ್ಕರವನ್ನು ಹಿಂಪಡೆದಿದ್ದಾರೆ. ಈ ಮೂಲಕ ಏಳು ದಿನಗಳ ಹೋರಾಟಕ್ಕೆ ತೆರೆ ಬಿದ್ದಿದೆ.
ಮುಷ್ಕರ ಕೈಬಿಡಿ: ಎಚ್ಡಿಕೆ ಮನವಿ
ಬೆಂಗಳೂರು: ವೈದ್ಯರು ತಕ್ಷಣ ಮುಷ್ಕರ ಕೈಬಿಟ್ಟು ಸೇವೆಗೆ ಮರಳಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ವೈದ್ಯರ ಮುಷ್ಕರದಿಂದ ಸಾವಿರಾರು ರೋಗಿಗಳಿಗೆ ತೊಂದರೆಯಾಗುತ್ತೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.