ರೈಲು
– ಪ್ರಜಾವಾಣಿ ಚಿತ್ರ
ಲಖನೌ: ದೆಹಲಿ–ಸಹಾರನ್ಪುರ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಸೀಟಿಗಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಭಾಗ್ಪತ್ ಜಿಲ್ಲೆಯ ಖೇಕ್ರಾ ರೈಲು ನಿಲ್ದಾಣ ಸಮೀಪ ನಡೆದಿದೆ.
ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಯಾದವ್ ಅವರು ಖೇಕ್ರಾದ ತಮ್ಮ ಮನೆಗೆ ತೆರಳುವ ಸಂಬಂಧ ಶುಕ್ರವಾರ ತಡರಾತ್ರಿ ದೆಹಲಿ– ಸಹಾರನ್ಪುರ ಪ್ಯಾಸೆಂಜರ್ ರೈಲು ಹತ್ತಿದ್ದರು. ಈ ವೇಳೆ ಕೆಲವು ಯುವಕರು ಸೀಟಿನ ವಿಚಾರವಾಗಿ ಜಗಳ ತೆಗೆದಿದ್ದಾರೆ. ಇದಕ್ಕೆ ದೀಪಕ್ ಕೂಡ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
‘ಈ ವೇಳೆ ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ದೀಪಕ್ ಮೇಲೆ ಹಲ್ಲೆ ನಡೆಸಿದ್ದು, ತೀವ್ರವಾಗಿ ಹಲ್ಲೆ ನಡೆಸಿದ್ದರು. ಖೇಕ್ರಾ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆಯೇ, ದೀಪಕ್ ಸೀದಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ವೇಳೆ ಅವರು ಕೊನೆಯುಸಿರೆಳೆದರು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಲ್ದಾಣ ತಲುಪುತ್ತಿದ್ದಂತೆಯೇ, ದಾಳಿ ನಡೆಸಿದವರು ಅಲ್ಲಿಂದ ಪರಾರಿಯಾಗಿದ್ದಾರೆ.
‘ಕೆಲವು ಕಿಡಿಗೇಡಿಗಳು ಮದ್ಯಸೇವಿಸಿ, ಹಲವು ಪ್ರಯಾಣಿಕರಿಗೆ ಹಲ್ಲೆ ನಡೆಸಿದ್ದ ಪ್ರಕರಣ ಕೆಲವು ದಿನಗಳ ಹಿಂದೆಯೂ ನಡೆದಿತ್ತು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.