ಠಾಣೆ/ಮುಂಬೈ: ಶನಿವಾರ ರಾತ್ರಿ ಇಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರ ವೇಳೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಅಧ್ಯಕ್ಷ, ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಮೇಲೆ ಯುವಕನೊಬ್ಬ ಕಪಾಳಮೋಕ್ಷ ಮಾಡಲು ಮುಂದಾಗಿದ್ದಾನೆ.
ಹಲ್ಲೆಗೆ ಮುಂದಾದ ವ್ಯಕ್ತಿಯನ್ನು 30 ವರ್ಷದ ಪ್ರವೀಣ್ ಗೋಸವಿ ಎಂದು ಗುರುತಿಸಲಾಗಿದೆ.
ಅಂಬೇರ್ನಾಥ್ ನೇತಾಜಿ ಮೈದಾನದಲ್ಲಿ ’ಭಾರತದ ಸಂವಿಧಾನ‘ ಕುರಿತಾಗಿ ಅಠವಳೆ ಅವರ ಭಾಷಣ ನಿಗದಿಯಾಗಿತ್ತು. ರಾತ್ರಿ 10.15ರ ವೇಳೆಗೆ ಅಠವಳೆ ಅವರಿಗೆ ಮಾಲೆಹಾಕಿದ ಮುಂದಾದ ಗೋಸವಿ, ನಂತರ ಹಲ್ಲೆಗೆ ಮುಂದಾಗಿದ್ದಾನೆ. ಸ್ಥಳದಲ್ಲಿದ್ದ ಪಕ್ಷದ ಕಾರ್ಯಕರರ್ತರುಸುಮಾರು 20ರಿಂದ 30 ಮಂದಿ ಸಭಿಕರು ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಆತನನ್ನು ಬಿಡಿಸಿ ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡ ಗೋಸವಿಯನ್ನು ಉಲ್ಲಾಸನಗರ ಆಸ್ಪತ್ರೆಗೆ ದಾಖಲಿಸಿ,ನಂತರ ಮುಂಬೈನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
’ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಐಪಿಸಿ ಕಲಂನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ‘ ಎಂದು ಅಂಬೇರ್ನಾಥ್ ಠಾಣೆಯ ಠಾಣಾಧಿಕಾರಿ ಕೆ.ಜಿ.ಚವ್ಹಾಣ್ ತಿಳಿಸಿದರು.
ವಜಾಗೊಳಿಸಿದ್ದಕ್ಕೆ ಸೇಡು: ’ಆರೋಪಿ ಗೋಸವಿ ಹಲವು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಮಾಹಿತಿ ಪಡೆದುಕೊಂಡು ಜನರಿಗೆ ಬೆದರಿಕೆ ಒಡ್ಡುತ್ತಿದ್ದ. ಇದೇ ಕಾರಣಕ್ಕಾಗಿ ವರ್ಷದ ಹಿಂದೆ ಆರ್ಪಿಐನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು. ಈ ಕಾರಣದಿಂದ ಆತ ಈ ರೀತಿ ಕೃತ್ಯವೆಸಗಿದ್ದಾನೆ‘ ಠಾಣೆ ವಲಯದ ಡಿಸಿಪಿ ಪಿ.ಪಿ. ಶೆವಲೆ ತಿಳಿಸಿದ್ದಾರೆ.
ಉಲ್ಲಾಸನಗರ ಬಂದ್: ಸಚಿವರ ಮೇಲೆ ಹಲ್ಲೆಗೆ ಮುಂದಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಕೃತ್ಯ ಖಂಡಿಸಿ, ಸ್ಥಳೀಯ ಆರ್ಪಿಐ ಘಟಕವೂಭಾನುವಾರ ಉಲ್ಲಾಸ್ನಗರದಲ್ಲಿ ಬಂದ್ಗೆ ಕರೆ ನೀಡಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.