ಏಟಾ(ಉತ್ತರ ಪ್ರದೇಶ): ತ್ರಿವಳಿ ತಲಾಖ್ ನೀಡುವುದನ್ನು ಅಪರಾಧವೆಂದು ಪರಿಗಣಿಸುವ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿರುವ ಬೆನ್ನಲೇ, ಏಟಾದ ವ್ಯಕ್ತಿಯೊಬ್ಬ ಫೋನ್ ಮೂಲಕವೇ ಹೆಂಡತಿಗೆ ತಲಾಖ್ ನೀಡಿರುವ ಪ್ರಕರಣ ವರದಿಯಾಗಿದೆ.
30 ನಿಮಿಷಗಳಲ್ಲಿ ಮನೆಗೆ ತಲುಪುವುದಾಗಿ ಹೆಂಡತಿ ಗಂಡನಿಗೆ ಹೇಳಿದ್ದಳು. ಆದರೆ, ಹೇಳಿದ ಸಮಯಕ್ಕೆ ಸರಿಯಾಗಿ ಮನೆಗೆ ಮರಳುವುದು ಸಾಧ್ಯವಾಗಲಿಲ್ಲ, ಅಷ್ಟರಲ್ಲಿ ಕರೆ ಮಾಡಿದ ಗಂಡ; ಅಲ್ಲಿಂದಲೇ ತಲಾಖ್..ತಲಾಖ್...ತಲಾಖ್...ಹೇಳಿಬಿಟ್ಟ.
'ಅಸ್ವಸ್ಥರಾಗಿದ್ದ ನನ್ನ ಅಜ್ಜಿಯನ್ನು ನೋಡಲು ತವರು ಮನೆಗೆ ಹೋಗಿದ್ದೆ. ಅರ್ಧ ಗಂಟೆಯಲ್ಲಿ ಮರಳಿ ಬರುವಂತೆ ನನ್ನ ಗಂಡ ತಾಕೀತು ಮಾಡಿದ್ದ. ನಾನು ಮನೆಗೆ ಬರುವುದು ಕೇವಲ 10 ನಿಮಿಷ ತಡವಾಗಿತ್ತು. ಅಷ್ಟರಲ್ಲಿ ನನ್ನ ತಾಯಿಯ ಮೊಬೈಲ್ಗೆ ಕರೆ ಮಾಡಿ ಮೂರು ಬಾರಿ ತಲಾಖ್ ಹೇಳಿದ. ಇದರಿಂದ ನಾನು ತೀವ್ರ ಆಘಾತಕ್ಕೆ ಒಳಗಾದೆ’ ಎಂದು ನೊಂದ ಮಹಿಳೆ ಎಎನ್ಐಗೆ ಪ್ರತಿಕ್ರಿಯಿಸಿದ್ದಾರೆ.
’ವರದಕ್ಷಿಣೆ ಬೇಡಿಕೆಗಳು ಪೂರ್ಣವಾಗಿ ಈಡೇರಿಲ್ಲ ಎಂದು ಅತ್ತೆಯೂ ಸಹ ಹೊಡೆಯುತ್ತಿರುತ್ತಾರೆ. ಮನೆಯಲ್ಲಿದ್ದಾಗಲೆಲ್ಲ ಹೊಡೆಯುತ್ತಿರುತ್ತಾರೆ, ಅವರಿಂದಾಗಿಯೇ ನಾನು ಗರ್ಭಪಾತಕ್ಕೆ ಒಳಗಾಗಬೇಕಾಯಿತು. ನನ್ನ ತವರು ಮನೆಯವರು ಬಡತನದಲ್ಲಿದ್ದಾರೆ, ಹಾಗಾಗಿ ಅವರಿಂದ ಗಂಡನ ಮನೆಯವರಿಗೆ ಏನನ್ನೂ ಕೊಡಲು ಸಾಧ್ಯವಾಗಿಲ್ಲ’ ಎಂದು ತನ್ನ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ.
’ನನಗೆ ಸರ್ಕಾರವೇ ನ್ಯಾಯಕೊಡಿಸಬೇಕು, ಇಲ್ಲವಾದರೆ ನಾನು ಉಳಿಯುವುದಿಲ್ಲ. ಆತ್ಮಹತ್ಯೆಗೆ ಶರಣಾಗುತ್ತೇನೆ.’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
2018ರ ಡಿಸೆಂಬರ್ 27ರಂದು ಲೋಕಸಭೆ ತ್ರಿವಳಿ ತಲಾಖ್ ಮಸೂದೆಯನ್ನು ಅನುಮೋದಿಸಿತ್ತು. ಇದರ ಪ್ರಕಾರ, ತ್ರಿವಳಿ ತಲಾಖ್ ಹೇಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಪತಿಗೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆ ಒಳಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.