ನವದೆಹಲಿ: ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕಾರಿ ಎಂಬುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬ ಬೋಯಿಂಗ್ ಇಂಡಿಯಾ ಕಚೇರಿ ಸಂಪರ್ಕಿಸಿ, ಕಂಪನಿಯೊಂದಿಗೆ ಮಾಡಲಾಗಿರುವ ರಕ್ಷಣಾ ಒಪ್ಪಂದಗಳ ಮಾಹಿತಿ ಕೇಳಿದ್ದಾರೆ.
ಅಲ್ಲದೇ, ಕಂಪನಿಯ ಅಧಿಕಾರಿಗಳು ಕೂಡಲೇ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರನ್ನು ಕಾಣಬೇಕು ಎಂಬುದಾಗಿಯೂ ಹೇಳಿದ್ದಾರೆ. ಈ ವ್ಯಕ್ತಿಯ ಬಂಧನಕ್ಕಾಗಿ ಸಿಬಿಐ ಶೋಧ ನಡೆಸಿದೆ.
ಅನಿರುದ್ಧ್ ಸಿಂಗ್ ಎಂಬಾತ ಬೋಯಿಂಗ್ ಕಂಪನಿಗೆ ಕರೆ ಮಾಡಿ, ಮಾಹಿತಿ ಕೇಳಿದ್ದ. ಈತನ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದೆ.
‘ಪಿಎಂಒ ಅಧಿಕಾರಿ ಎಂದು ಹೇಳಿಕೊಂಡ ಅನಿರುದ್ಧ್ ಸಿಂಗ್ ಕಳೆದ ವರ್ಷ ನವೆಂಬರ್ನಲ್ಲಿ ಹಲವು ಬಾರಿ ಮೊಬೈಲ್ ಕರೆ ಮಾಡಿದ್ದ. ಪಿ.ಕೆ.ಮಿಶ್ರಾ ಅವರ ವಿಶೇಷ ಸಹಾಯಕ ಜಿತೇಂದ್ರಕುಮಾರ್ ಜೊತೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದ ಅನಿರುದ್ಧ್ ಸಿಂಗ್, ರಕ್ಷಣಾ ಒಪ್ಪಂದಗಳ ಬಗ್ಗೆಮಾಹಿತಿ ಕೇಳಿದ’ ಎಂದು ಬೋಯಿಂಗ್ ಇಂಡಿಯಾ ಅಧಿಕಾರಿ ಪ್ರವೀಣ್ ಯೋಗಂಭಟ್ ಅವರು ಪಿಎಂಒಗೆ ದೂರು ಸಲ್ಲಿಸಿದ್ದಾರೆ.
ಇದರ ಆಧಾರದ ಮೇಲೆಪಿಎಂಒ ಸಹಾಯಕ ನಿರ್ದೇಶಕ ಪಿ.ಕೆ.ಇಸ್ಸಾರ್ ನೀಡಿರುವ ದೂರಿನನ್ವಯ ಸಿಬಿಐ ಜೂನ್ 30ರಂದು ಪ್ರಕರಣ ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.