ADVERTISEMENT

ಸಂತ್ರಸ್ತರನ್ನು ರಕ್ಷಿಸುವಲ್ಲಿ ಕಾನೂನು ವಿಫಲ: ಕೋರ್ಟ್‌ನಿಂದ ದೆಹಲಿ ಪೊಲೀಸರ ತರಾಟೆ

ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ನ್ಯಾಯಾಲಯ

ಪಿಟಿಐ
Published 6 ಆಗಸ್ಟ್ 2021, 10:24 IST
Last Updated 6 ಆಗಸ್ಟ್ 2021, 10:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಆರೋಪಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಸಹಾಯಕರನ್ನು ರಕ್ಷಿಸುವಲ್ಲಿ ವ್ಯವಸ್ಥೆಯೇ ಸೋಲುತ್ತಿದೆ ಎಂದು ಹೇಳಿದೆ.

ಆರೋಪಿ ನಂದನಾಯಕ್, ತನ್ನ ವಿರುದ್ಧದ ಪ್ರಕರಣವೊಂದರಲ್ಲಿ ಪತ್ನಿ ಝರ್ನಾ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಕಾರಣ, ಆಕೆಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ತನಗೆ ನೀಡಿದ್ದ ಮಧ್ಯಂತರ ಜಾಮೀನು ರದ್ದಾಗಿ, ಜೈಲಿಗೆ ಹೋಗುವ ವೇಳೆ ಪೊಲೀಸರ ಎದುರು ಈ ಹೇಳಿಕೆ ನೀಡಿದ್ದಾನೆ.

ಹೆಚ್ಚುವರಿ ಸೆಷನ್‌ ನ್ಯಾಯಾಧೀಶ ಅನುಜ್‌ ಅಗರ್‌ವಾಲ್‌ ‘ಜುಲೈ 16ರಂದು ನೀಡಿದ ಆದೇಶವನ್ನು ಪೊಲೀಸರು ಶ್ರದ್ಧೆಯಿಂದ ಪಾಲಿಸಿಲ್ಲ. ಈ ಆದೇಶದಲ್ಲಿ ಆರೋಪಿ ಪತ್ನಿಗೆ ಭದ್ರತೆ ನೀಡುವಂತೆ ನಿರ್ದೇಶಿಸಲಾಗಿತ್ತು‘ ಎಂದು ಹೇಳಿದರು.

ADVERTISEMENT

ಈ ಪ್ರಕರಣದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುವಂತೆ ದೆಹಲಿ ಪೊಲೀಸರಿಗೆ ತಿಳಿಸಿದನ್ಯಾಯಾಲಯ, ಸಂಬಂಧಿಸಿದ ಅಧಿಕಾರಿಗೆ ತನ್ನ ಜವಾಬ್ದಾರಿ ಏನೆಂದು ತಿಳಿಹೇಳಬೇಕು. ಈ ವಿಷಯದಲ್ಲಿ ಅವರು ತೆಗೆದುಕೊಂಡ ಪರಿಹಾರ ಕ್ರಮದ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ನ್ಯಾಯಾಧೀಶರು ಆಗಸ್ಟ್‌ 5 ರಂದು ನೀಡಿದ್ದ ಆದೇಶದಲ್ಲಿ, ‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಬ್ಬ ಅಮಾಯಕ ವ್ಯಕ್ತಿ ಜೀವ ಕಳೆದುಕೊಳ್ಳುವಂತಾಯಿತು. ಅಸಹಾಯಕ ಸಂತ್ರಸ್ತರನ್ನು ರಕ್ಷಿಸುವಲ್ಲಿ ವ್ಯವಸ್ಥೆಯೇ ವಿಫಲವಾಗಿದೆ‘ ಎಂದು ಹೇಳಿದ್ದರು.

‘ಶಾಂತಿ, ಸೇವೆ ಮತ್ತು ನ್ಯಾಯ‘ಎನ್ನುವುದು ದೆಹಲಿ ಪೊಲೀಸರ ಧ್ಯೇಯವಾಗಿದೆ. ಆದರೆ ಈ ಪ್ರಕರಣದಲ್ಲಿ ಅವೆಲ್ಲವೂ ಇಲ್ಲವಾಗಿದೆ‘ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.