ಬಂಧನ
ಗುವಾಹಟಿ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಕುಕಿ ಸಮುದಾಯದ ಮಹಿಳಾ ವೈದ್ಯರೊಬ್ಬರನ್ನು ಕ್ರೂರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ರಾಜ್ಕುಮಾರ್ ಮೈಪಕ್ಸಾನಾ ಬಂಧಿತ ಆರೋಪಿ.
ಈತ ನಿಷೇಧಿತ ಬಂಡುಕೋರರ ಗುಂಪು ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್ನ ಕೇಡರ್ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಸೋಮವಾರ ತಿಳಿಸಿದೆ.
ಝೈರಾನ್ ಗ್ರಾಮದಲ್ಲಿ ಕಳೆದ ವರ್ಷದ ನವೆಂಬರ್ನಲ್ಲಿ ಜೋಸಾಂಗ್ಕಿಮ್ ಎಂಬ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ನಂತರ ಹಲವು ಮನೆಗಳಿಗೆ ಬೆಂಕಿ ಹಚ್ಚಿ ಲೂಟಿ ಮಾಡಲಾಗಿತ್ತು ಎಂದು ಎನ್ಐಎ ಹೇಳಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕಣಿವೆ ಮೂಲದ ಬಂಡುಕೋರ ಗುಂಪುಗಳಾದ ಯುಎನ್ಎಲ್ಎಫ್ ಮತ್ತು ಕೆಕೆಎಲ್ನ ಇಬ್ಬರು ಕಾರ್ಯಕರ್ತರನ್ನು ಎನ್ಐಎ ಬಂಧಿಸಿದೆ.
ಮಣಿಪುರದ ಕುಕಿ ಪ್ರಾಬಲ್ಯದ ಟೆಂಗ್ನೌಪಾಲ್ ಜಿಲ್ಲೆಯ ಮೊರೆಹ್ನಲ್ಲಿರುವ ಐಆರ್ಬಿ ಪೋಸ್ಟ್ ಮೇಲೆ ಕಳೆದ ವರ್ಷದ ಜ. 17ರಂದು ದಾಳಿ ನಡೆಸಿದ ಆರೋಪಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.
ಟೆಂಗ್ನೌಪಾಲ್ ನಿವಾಸಿ ಥಾಂಗ್ಮಿನ್ಲಾರ್ ಅಲಿಯಾಸ್ ಲೆನಿನ್ನನ್ನು ಅಸ್ಸಾಂನ ಸಿಲ್ಚಾರ್ನಲ್ಲಿ ಭಾನುವಾರ ಬಂಧಿಸಲಾಗಿದ್ದು, ಈತ ಬಂಡುಕೋರ ಗುಂಪುಗಳೊಂದಿಗೆ ನಂಟು ಹೊಂದಿರುವ ಮಾಹಿತಿ ಇನ್ನೂ ಖಚಿತಪಟ್ಟಿಲ್ಲ ಎಂದು ಎನ್ಐಎ ಹೇಳಿದೆ.
ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೊದಲ ವ್ಯಕ್ತಿ ಈತನಾಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.