ADVERTISEMENT

ಈಗ ಶ್ರೀಕೃಷ್ಣ ಜನ್ಮಭೂಮಿಗಾಗಿ ಕಾನೂನು ಹೋರಾಟ: ವಿಚಾರಣೆಗೆ ದಿನಾಂಕ ನಿಗದಿ

ಪಿಟಿಐ
Published 21 ಫೆಬ್ರುವರಿ 2021, 1:54 IST
Last Updated 21 ಫೆಬ್ರುವರಿ 2021, 1:54 IST
ಶ್ರೀ ಕೃಷ್ಣನ ಜನ್ಮಭೂಮಿ ಎಂದು ನಂಬಲಾಗಿರುವ ಕತ್ರ ಕೇಶವ ದೇಗುಲದ ಬಳಿಯಲ್ಲೇ ಇರುವ ಶಾಹಿ ಈದ್ಗಾ ಮಸೀದಿ (ಪಿಟಿಐ ಚಿತ್ರ)
ಶ್ರೀ ಕೃಷ್ಣನ ಜನ್ಮಭೂಮಿ ಎಂದು ನಂಬಲಾಗಿರುವ ಕತ್ರ ಕೇಶವ ದೇಗುಲದ ಬಳಿಯಲ್ಲೇ ಇರುವ ಶಾಹಿ ಈದ್ಗಾ ಮಸೀದಿ (ಪಿಟಿಐ ಚಿತ್ರ)   

ಮಥುರಾ: ಶ್ರೀ ಕೃಷ್ಣನ ಜನ್ಮಸ್ಥಳವೆಂದು ನಂಬಲಾಗಿರುವ ಮಥುರಾದ ದೇಗುಲದ ಬಳಿಯಿಂದ 17 ನೇ ಶತಮಾನದ ಮಸೀದಿಯನ್ನು ಸ್ಥಳಾಂತರಿಸಲು ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ. ಕೋರ್ಟ್‌ ಅರ್ಜಿಗಳ ವಿಚಾರಣೆಗೆ ಒಪ್ಪಿದ್ದು, ದಿನಾಂಕವನ್ನೂ ನಿಗದಿ ಮಾಡಿದೆ ಎಂದು ಜಿಲ್ಲಾಡಳಿತದ ಕಾನೂನು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿವಿಲ್ ನ್ಯಾಯಾಧೀಶ ನೇಹಾ ಬನೌಡಿಯಾ ಈ ಮೊಕದ್ದಮೆಗಳನ್ನು ವಿಚಾರಣೆಗಾಗಿ ಕೈಗೆತ್ತಿಕೊಂಡಿದ್ದು, ಮಾರ್ಚ್ 10ಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ.

ಎರಡು ಮೊಕದ್ದಮೆಗಳ ಪೈಕಿ ಒಂದನ್ನು ವಕೀಲ ಶೈಲೇಂದ್ರ ಸಿಂಗ್ ಮತ್ತು ಇತರ ನಾಲ್ವರು ಸಲ್ಲಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ಸಂಜಯ್ ಗೌರ್ ತಿಳಿಸಿದ್ದಾರೆ. ಇದರ ಜೊತೆಗೆ, ಹಿಂದೂ ಸೇನಾ ಮುಖ್ಯಸ್ಥ ಮನೀಶ್ ಯಾದವ್ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆಗೂ ಒಪ್ಪಲಾಗಿದೆ.

ADVERTISEMENT

ಶ್ರೀಕೃಷ್ಣನ ಜನ್ಮಸ್ಥಳ ಎಂದು ನಂಬಲಾದ ಮಥುರಾದ ಕತ್ರ ಕೇಶವ ದೇವ ದೇವಸ್ಥಾನದ 13.37 ಎಕರೆ ಆವರಣದಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ಸ್ಥಳಾಂತರಿಸಲು ಅವರು ಪ್ರಯತ್ನ ನಡೆಸಿದ್ದಾರೆ ಎಂದು ಸಂಜಯ್‌ ಗೌರ್‌ ಹೇಳಿದ್ದಾರೆ.

ಈ ವಿಷಯದಲ್ಲಿ ಅರ್ಜಿ ಸಲ್ಲಿಸ ಬಯಸುವವರು ಯಾರಾದರೂ ಇದ್ದರೆ ಒಂದು ತಿಂಗಳೊಳಗೆ ಸಲ್ಲಿಸಬಹುದು. ನಂತರ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.