ಲಖನೌ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸಿ ಹೇಳಿಕೆ ನೀಡಿದ ಕಾರಣಕ್ಕೆ ಬಿಎಸ್ಪಿ ಉಪಾಧ್ಯಕ್ಷ ಜೈ ಪ್ರಕಾಶ್ ಸಿಂಗ್ ಅವರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಹುದ್ದೆಗಳಿಂದ ಮಂಗಳವಾರ ತೆಗೆದು ಹಾಕಿದ್ದಾರೆ.
'ರಾಹುಲ್ ಗಾಂಧಿಯವರು ತನ್ನ ತಂದೆ ರಾಜೀವ್ ಗಾಂಧಿ ಅವರನ್ನು ಅನುಸರಿಸಿದ್ದರೆ, ಅವರ ಮೇಲೆ ಜನರಿಗೆ ಸ್ವಲ್ಪ ವಿಶ್ವಾಸ ಇರುತ್ತಿತ್ತು. ಆದರೆ, ಅವರು ತನ್ನ ತಾಯಿ ವಿದೇಶಿಗರಾದ ಸೋನಿಯಾ ಗಾಂಧಿಯವರ ಹೆಜ್ಜೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ರಾಹುಲ್ ಭಾರತದ ರಾಜಕಾರಣದಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ' ಎಂದು ಜೈ ಪ್ರಕಾಶ್ ಸಿಂಗ್ ಸೋಮವಾರ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.
ಪ್ರತಿಸ್ಪರ್ಧಿ ರಾಜಕೀಯ ಪಕ್ಷದ ನಾಯಕರ ವಿರುದ್ಧ ಸಿಂಗ್ ಮಾಡಿರುವ ವೈಯಕ್ತಿಕ ಟೀಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಾಯಾವತಿ, ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದಲೂ ಕಿತ್ತು ಹಾಕಿದ್ದಾರೆ. ಸಿಂಗ್ ಅವರನ್ನು ಕಳೆದ ಮೇ ತಿಂಗಳಲ್ಲಿ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದರು.
‘ಸಿಂಗ್ ಅವರದು ವೈಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷದ ಸಂಸ್ಕೃತಿಗೆ ಸಂಪೂರ್ಣ ವಿರುದ್ಧವಾಗಿ ಮಾತನಾಡಿದ್ದಾರೆ. ಅಲ್ಲದೆ, ಅವರ ಹೇಳಿಕೆ ನಮ್ಮ ತತ್ವಸಿದ್ಧಾಂತಗಳನ್ನು ದಿಕ್ಕುತಪ್ಪಿಸುವಂತಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಹಾಗಾಗಿ ಪಕ್ಷದ ಹಿತದೃಷ್ಟಿಯಿಂದ ಅವರನ್ನು ಎಲ್ಲ ಹುದ್ದೆಗಳಿಂದಲೂ ತೆಗೆದು ಹಾಕಿದ್ದೇವೆ’ ಎಂದು ಮಾಯಾವತಿ ತಿಳಿಸಿದ್ದಾರೆ.
ಯಾವುದೇ ರಾಜ್ಯದಲ್ಲಿ ಚುನಾವಣಾ ಮೈತ್ರಿ ಘೋಷಣೆಯನ್ನು ಪಕ್ಷ ಅಧಿಕೃತಗೊಳಿಸುವವರೆಗೂ ಈ ಬಗ್ಗೆ ಕಾರ್ಯಕರ್ತರು ಹೇಳಿಕೆ ನೀಡಬಾರದು. ಪಕ್ಷದ ಹಿರಿಯರು ಮತ್ತು ಪದಾಧಿಕಾರಿಗಳು ಪ್ರಮುಖ ವಿಷಯಗಳ ಬಗ್ಗೆ ಹೇಳಿಕೆ ನೀಡುವಾಗ ಲಿಖಿತವಾಗಿ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.