ತಿರುವನಂತಪುರ: ದೂರು ನೀಡಲು ಬಂದ ಮಹಿಳೆಯೊಂದಿಗೆ ಸರಿಯಾಗಿ ವರ್ತಿಸದೆ ಬೇಜವಾಬ್ದಾರಿತನ ತೋರಿದ ಕಾರಣಕ್ಕೆ ತೀವ್ರ ಟೀಕೆಗಳು ಎದುರಾದ ಮರು ದಿನವೇ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸೆಫೀನ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಲಯಾಳ ಭಾಷೆಯ ಟಿ.ವಿ. ಚಾನೆಲ್ವೊಂದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬುಧವಾರ ಕೌಟುಂಬಿಕ ಹಿಂಸಾಚಾರದ ವಿರುದ್ಧ ದೂರು ನೀಡಿದ್ದ ಮಹಿಳೆಯೊಂದಿಗೆ ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸದಸ್ಯರೂ ಆದ ಜೋಸೆಫೀನ್ ಕಠಿಣವಾಗಿ ಮಾತನಾಡಿದ್ದರು ಎಂಬ ಟೀಕಿಗಳು ಕೇಳಿಬಂದಿದ್ವವು. ಈ ಘಟನೆ ಆಡಳಿತಾರೂಢ ಸಿಪಿಎಂಗೆ ಇದು ಮುಜುಗರ ಉಂಟು ಮಾಡಿದೆ.
ಸಿಪಿಎಂ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಜೋಸೆಫೀನ್ ಅವರು ಘಟನೆಗೆ ಸಂಬಂಧಿಸಿದಂತೆ ವಿವರಣೆ ನೀಡಿದ್ದು, ತಮ್ಮ ನಿಲುವು ಪ್ರಕಟಿಸಿದ್ದರು. ತಕ್ಷಣ ರಾಜೀನಾಮೆ ನೀಡುವಂತೆ ಪಕ್ಷದ ನಾಯಕರು ಸೂಚನೆ ನೀಡಿದ್ದರು. ಅವರು ಶೀಘ್ರದಲ್ಲೇ ರಾಜೀನಾಮೆ ಪತ್ರವನ್ನು ಮುಖ್ಯ ಕಾರ್ಯದರ್ಶಿಗೆ ನೀಡಲಿದ್ದಾರೆ’ ಎಂದು ಪಕ್ಷದ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜೋಸೆಫೀನ್ ಅವರ ನಡವಳಿಕೆ ಖಂಡಿಸಿ, ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದವು.
ಟಿ.ವಿ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ‘ನನ್ನ ಪತಿ ಮತ್ತು ಅತ್ತೆಯಿಂದ ಕಿರುಕುಳ ಅನುಭವಿಸುತ್ತಿದ್ದೇನೆ. ತಾನು 2014ರಲ್ಲಿ ಮದುವೆಯಾಗಿದ್ದೇನೆ. ನನಗೆ ಮಕ್ಕಳಿಲ್ಲ. ಗಂಡ ಮತ್ತು ಅತ್ತೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದರು. ಆಗ ಜೋಸೆಫೀನ್ ‘ಪೊಲೀಸರಿಗೆ ದೂರು ನೀಡಿದ್ದೀರಾ’ ಎಂದು ಮಹಿಳೆಯನ್ನು ಪ್ರಶ್ನಿಸಿದ್ದರು. ಮಹಿಳೆ ಪೊಲೀಸರಿಗೆ ದೂರು ನೀಡಿಲ್ಲ ಎಂದಾಗ, ಜೋಸೆಫೀನ್ ‘ದೂರು ನೀಡದಿರುವ ಕಾರಣಕ್ಕೆ ಕಿರುಕುಳ ಅನುಭವಿಸುತ್ತಿದ್ದೀರಿ’ ಎಂದು ಮಹಿಳೆ ಮೇಲೆ ಕೋಪತಾಪ ವ್ಯಕ್ತಪಡಿಸಿದ್ದರು.
ನೇರಪ್ರಸಾರದ ಕಾರ್ಯಕ್ರಮದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರು ತೋರಿದ ವರ್ತನೆಯ ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗಿದ್ದು, ಎಡಪಂಥೀಯ ಜಾಲತಾಣಿಗರಿಂದಲೂ ಅಧ್ಯಕ್ಷರ ವರ್ತನೆಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಅಧ್ಯಕ್ಷರ ರಾಜೀನಾಮೆಗೆ ಕೂಗು ಎದ್ದಿತ್ತು. ಈ ಘಟನೆಯ ನಂತರ ಜೋಸೆಫೀನ್ ವಿಷಾದ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.