ADVERTISEMENT

ಜುಲೈ 18ರಿಂದ ಮುಂಗಾರು ಅಧಿವೇಶನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 20:05 IST
Last Updated 25 ಜೂನ್ 2018, 20:05 IST

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಂದು ಆರಂಭವಾಗಿ ಆಗಸ್ಟ್‌ 10ರವರೆಗೆ ನಡೆಯಲಿದೆ. ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಸಂಸದೀಯ ವ್ಯವಹಾರಗಳ ಸಮಿತಿಯು ಸೋಮವಾರ ಸಭೆ ನಡೆಸಿ ಈ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಶಿಫಾರಸು ಕಳುಹಿಸಿದೆ.

‘ಒಟ್ಟು 18 ದಿನಗಳ ಕಲಾಪ ನಡೆಯಲಿದೆ. ಅಧಿವೇಶನಗಳ ನಡುವಣ ಅವಧಿಯಲ್ಲಿ ಹೊರಡಿಸಲಾದ ಆರು ಸುಗ್ರೀವಾಜ್ಞೆಗಳ ಬದಲು ಕಾಯ್ದೆ ಜಾರಿಗೆ ತರುವುದು ನಮ್ಮ ಆದ್ಯತೆಯಾಗಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಬಜೆಟ್‌ ಅಧಿವೇಶನದಲ್ಲಿ ಶಾಸನ ರೂಪಿಸುವ ಕೆಲಸಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸಲು ಎಲ್ಲ ಪ್ರಯತ್ನ ನಡೆಸಲಾಗುವುದು. ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ವಿಜಯ ಗೋಯಲ್‌ ಮತ್ತು ಅರ್ಜುನ್‌ ರಾಮ್‌ ಮೇಘವಾಲ್‌ ಅವರು ವಿರೋಧ ಪಕ್ಷಗಳ ಮುಖಂಡರನ್ನು ಭೇಟಿಯಾಗಲಿದ್ದಾರೆ ಎಂದು ಅನಂತಕುಮಾರ್‌ ತಿಳಿಸಿದ್ದಾರೆ.

ADVERTISEMENT

ತ್ರಿವಳಿ ತಲಾಖ್‌ ಮಸೂದೆ:ತ್ರಿವಳಿ ತಲಾಖ್‌ ನಿಷೇಧ ಮಸೂದೆಯನ್ನು ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆ ಅಂಗೀಕರಿಸಿದೆ. ಆದರೆ, ರಾಜ್ಯಸಭೆಯ ಅನುಮೋದನೆ ಸಿಕ್ಕಿಲ್ಲ. ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸುವುದಕ್ಕಾಗಿ ಈ ಮಸೂದೆ ಸಿದ್ಧಪಡಿಸಲಾಗಿದೆ. ಇದನ್ನು ಉಲ್ಲಂಘಿಗಿಸುವ ಗಂಡನಿಗೆ ಮೂರು ವರ್ಷವರೆಗೆ ಶಿಕ್ಷೆ ವಿಧಿಸುವ ಪ್ರಸ್ತಾವವಿದೆ.

ಈ ಮಸೂದೆಯನ್ನು ‘ಐತಿಹಾಸಿಕ’ ಎಂದು ಸರ್ಕಾರ ಬಣ್ಣಿಸಿದೆ. ಈ ವಿಚಾರವನ್ನು ಗುಜರಾತ್‌ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಳಸಿಕೊಂಡಿತ್ತು.

ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದು ಕಷ್ಟ ಎಂಬುದನ್ನು ಮನಗಂಡಿದ್ದ ಸರ್ಕಾರ, ವಿರೋಧ ಪಕ್ಷಗಳು ಸೂಚಿಸುವ ಬದಲಾವಣೆಗಳನ್ನು ಸೇರಿಸಿಕೊಳ್ಳಲು ಸಿದ್ಧವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.