ADVERTISEMENT

ಶ್ರವಣ ದೋಷವುಳ್ಳ ವ್ಯಕ್ತಿಗೆ ಸರ್‌ಪಂಚ್‌ ಆಗುವ ಅವಕಾಶ

ಪಿಟಿಐ
Published 9 ಫೆಬ್ರುವರಿ 2020, 17:28 IST
Last Updated 9 ಫೆಬ್ರುವರಿ 2020, 17:28 IST

ಇಂದೋರ್‌: ಮಧ್ಯಪ್ರದೇಶದ ದನ್ಸಾರಿ ಗ್ರಾಮ ಪಂಚಾಯ್ತಿಯ ಸರ್ಪಂಚ್‌ ಸ್ಥಾನಕ್ಕೆ ವಾಕ್‌ ಮತ್ತು ಶ್ರವಣ ದೋಷವುಳ್ಳ ವ್ಯಕ್ತಿ ಆಯ್ಕೆಯಾಗುವ ಸಾಧ್ಯತೆ ಇದೆ.

ಇದು ಸಾಧ್ಯವಾದರೆ ಈ ಸ್ಥಾನಕ್ಕೆ ಆಯ್ಕೆಯಾಗುವ ದೇಶದ ಮೊದಲ ವಾಕ್‌ ಮತ್ತು ಶ್ರವಣ ದೋಷವುಳ್ಳ ವ್ಯಕ್ತಿ ಎಂಬ ಹಿರಿಮೆ ಲಾಲು ಅವರಿಗೆ ಸಲ್ಲುತ್ತದೆ.

ಇಂದೋರ್‌ನಿಂದ 40 ಕಿ.ಮೀ ದೂರದಲ್ಲಿರುವ ದನ್ಸಾರಿ ಗ್ರಾಮದಲ್ಲಿ 1000 ಜನಸಂಖ್ಯೆ ಇದೆ ಎಂದು ಉಪ ವಿಭಾಗದ ಅಧಿಕಾರಿ ಪ್ರತುಲ್‌ ಸಿನ್ಹಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ದನ್ಸಾರಿ ಗ್ರಾಮ ಪಂಚಾಯ್ತಿಯ ಸರ್ಪಂಚ್‌ ಸ್ಥಾನ ಈ ಬಾರಿ ಎಸ್‌.ಟಿ ಪ್ರವರ್ಗಕ್ಕೆ ಮೀಸಲಾಗಿದೆ. ಇಡೀ ಗ್ರಾಮದಲ್ಲಿ ಇರುವ ಏಕೈಕ ಎಸ್‌.ಟಿ ಮತದಾರ ಲಾಲು ಅವರಾಗಿದ್ದು, ಅವರಿಗೆ ಸರ್ಪಂಚ್‌ ಆಗುವ ಅದೃಷ್ಟ ಒಲಿದು ಬಂದಿದೆ. ಅವರೂ ಚುನಾವಣೆಗೆ ನಿಲ್ಲುವ ಆಸಕ್ತಿ ತೋರಿದ್ದಾರೆ.

ಗ್ರಾಮ ಪಂಚಾಯ್ತಿಯ ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ ದನ್ಸಾರಿ ಗ್ರಾಮದಲ್ಲಿ ಲಾಲು ಅವಿರೋಧ ಆಯ್ಕೆಯಾಗುವುದು ಖಚಿತ ಎಂದು ಗ್ರಾಮದವರೇ ಹೇಳುತ್ತಾರೆ.

27 ವರ್ಷದ ಲಾಲು ಬಾಲ್ಯದಲ್ಲಿಯೇ ಪೋಷಕರನ್ನು ಕಳೆದುಕೊಂಡಿದ್ದಾರೆ. ಗ್ರಾಮದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಾ, ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

‘ಸರ್ಪ್‌ಂಚ್‌ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ’ ಲಾಲು ಅವರು ಸಂಜ್ಞೆ ಭಾಷೆಯಲ್ಲಿ ತಿಳಿಸಿದ್ದಾರೆ.

‘ಲಾಲು ಅವರು ಸರ್ಪಂಚ್‌ ಆಗಿ ಆಯ್ಕೆಯಾದರೆ, ಆ ಸ್ಥಾನಕ್ಕೆ ಆಯ್ಕೆಯಾದ ದೇಶದ ಮೊದಲ ವಾಕ್‌ ಮತ್ತು ಶ್ರವಣ ದೋಷವುಳ್ಳ ವ್ಯಕ್ತಿ ಆಗಲಿದ್ದಾರೆ. ಅವರು ವಾಕ್‌ ಮತ್ತು ಶ್ರವಣ ದೋಷವುಳ್ಳವರ ಸಮುದಾಯದ ಧ್ವನಿಯಾಗಲಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಗ್ಯಾನೇಂದ್ರ ಪುರೋಹಿತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.