ಶ್ರೀನಗರ: ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ಸಾಧ್ಯ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಭಾನುವಾರ ಜಮ್ಮುನಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾ, ಕಾಶ್ಮೀರ ಸಮಸ್ಯೆಗೆ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರೇ ಕಾರಣ ಎಂದಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದಲ್ಲಿ ನೆಲೆಸಿರುವಅಕ್ರಮ ವಲಸೆಗಾರರನ್ನು ದೇಶದಿಂದ ಹೊರಹಾಕುವ, ಅದರಲ್ಲಿಯೂ ಬಾಂಗ್ಲಾದೇಶದವರನ್ನು ಹೊರಹಾಕುವ ಪ್ರಕ್ರಿಯೆಯನ್ನ ನಾವುಮಾಡುತ್ತಿದ್ದೇವೆ.
ನಮ್ಮ ದೇಶ ಹಲವಾರು ಭದ್ರತಾ ಸಮಸ್ಯೆಗಳನ್ನು ಎದುರಿಸಿದೆ.ಈ ದೇಶಕ್ಕೆ ಭದ್ರತೆ ಒದಗಿಸಲು ಮೋದಿಯಿಂದಮಾತ್ರ ಸಾಧ್ಯ. ದೇಶವನ್ನು ಶಕ್ತಿ ಶಾಲಿ ರಾಷ್ಟ್ರವನ್ನಾಗಿಸುವ ಮತ್ತು ಪಾಕಸ್ತಾನಕ್ಕೆ ತಕ್ಕ ಉತ್ತರ ನೀಡುವ ಸಾಮರ್ಥ್ಯವಿರುವುದು ಮೋದಿಗೆ ಮಾತ್ರ ಎಂದಿದ್ದಾರೆ ಅಮಿತ್ ಶಾ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ ಶಾ, ಜಮ್ಮು ಕಾಶ್ಮೀರದಲ್ಲಿನ ಸಮಸ್ಯೆಗೆ ರಾಹುಲ್ ಗಾಂಧಿಯ ತಾತ ನೆಹರೂ ಅವರೇ ಕಾರಣ. ನೆಹರೂ ಅವರು ಈ ವಿಷಯದಲ್ಲಿ ತಮ್ಮ ಸ್ವಂತ ನಿರ್ಧಾರತೆಗೆದುಕೊಂಡು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಮೂಲೆ ಗುಂಪಾಗಿಸಿದ್ದರು.
ಆದರೆ ಚಿಂತೆ ಮಾಡಬೇಡಿ, ಇದು ಕಾಂಗ್ರೆಸ್ ಸರ್ಕಾರವಲ್ಲ.ನಾವು ಜಮ್ಮು ಕಾಶ್ಮೀರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಭಯೋತ್ಪಾದನೆಯನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಶಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.