ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೂತನ ಭೂ ಕಾಯ್ದೆಯನ್ನು ಪರಿಚಯಿಸಿದ ಮೂರು ದಿನಗಳಲ್ಲಿಯೇ ಇಲ್ಲಿನ ಸರ್ಕಾರ ಸುಮಾರು 3000 ಎಕರೆ ಭೂಮಿಯನ್ನು ಉದ್ಯಮ ಸ್ಥಾಪನೆ ಉದ್ದೇಶಕ್ಕಾಗಿ ಕಾಯ್ದಿರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಭೂಮಿ ಹಸ್ತಾಂತರಿಸಲಾಗಿದೆ. ಮತ್ತೆ, ಅರಣ್ಯ ಇಲಾಖೆ ಸಮ್ಮತಿ ನಂತರ ಇಷ್ಟೇ ಪ್ರಮಾಣದ ಭೂಮಿ ಹಸ್ತಾಂತರ ಕುರಿತು ಅಧಿಸೂಚನೆ ಹೊರಬೀಳಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕೋವಿಡ್–19 ಪರಿಸ್ಥಿತಿಯ ನಡುವೆಯೂ ಸುಮಾರು 65 ಬೃಹತ್ ಉದ್ಯಮ ಸಂಸ್ಥೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯಮ ಚಟುವಟಿಕೆ ವಿಸ್ತರಿಸುವ ಸಂಬಂಧ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿವೆ.
ಸದ್ಯ ಹಸ್ತಾಂತರಿಸಲಾಗಿರುವ ಜಮ್ಮು ವಲಯದ ಭೂಮಿಯು ಜಮ್ಮು, ಕತುವಾ, ಉದಂಪುರ್, ಸಾಂಬಾ, ರಜೌರಿ, ಪೂಂಚ್ ಜಿಲ್ಲೆಗಳು ಮತ್ತು ಕಾಶ್ಮೀರ ವಿಭಾಗದ ಶ್ರೀನಗರ, ಬಾರಾಮುಲ್ಲಾ, ಬುದ್ಗಾಮ್, ಅನಂತನಾಗ್ ಜಿಲ್ಲೆಗಳಲ್ಲಿವೆ. ಜಮ್ಮು ಮತ್ತು ಕಾಶ್ಮೀರ ಸದ್ಯ ಉದ್ಯಮ ಸ್ಥಾಪನೆಗಾಗಿ ಇಲಾಖೆ ಸುಪರ್ದಿಯಲ್ಲಿ 242.25 ಎಕರೆ ಭೂಮಿಯಷ್ಟೇ ಇದ್ದು, ಆಹಾರ ಸಂಸ್ಕರಣೆ, ಚಿತ್ರನಿರ್ಮಾಣ ಕೇಂದ್ರಗಳು, ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳ ಉದ್ಯಮ ಸ್ಥಾಪನೆಗೆ ಹೂಡಿಕೆದಾರರನ್ನು ಸೆಳೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.