ADVERTISEMENT

ಗಂಗಾ ನದಿಯಲ್ಲಿ ತೇಲಿದ ಕೋವಿಡ್ ಮೃತದೇಹ: ಎನ್‌ಜಿಟಿ ತರಾಟೆ

ವರದಿ ನೀಡುವಂತೆ ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 17:57 IST
Last Updated 16 ಮೇ 2022, 17:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಸೋಂಕಿತ ಮೃತದೇಹಗಳ ಅಂತ್ಯಕ್ರಿಯೆ ವೇಳೆ ಮಾರ್ಗಸೂಚಿ ಪಾಲನೆ ಮಾಡಲಾಗಿದೆಯೇ ಎಂಬ ಕುರಿತು ವರದಿ ನೀಡುವಂತೆರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಗಳಿಗೆ ಸೂಚಿಸಿದೆ.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದಎನ್‌ಜಿಟಿ ಪ್ರಧಾನ ಪೀಠ,‘ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೋವಿಡ್‌ ಆರಂಭಕ್ಕೂ ಮೊದಲು ಅಂದರೆ 2018 ಮತ್ತು 2019ರಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದಎಷ್ಟು ಮೃತದೇಹಗಳನ್ನು ನದಿ ತಟದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಹಾಗೆಯೇ ಕೋವಿಡ್‌ ಆರಂಭದ ನಂತರದಿಂದ ಪ್ರಸಕ್ತ ವರ್ಷ ಮಾರ್ಚ್‌ 31ರ ವರೆಗೆ ಎಷ್ಟು ಶವಗಳ ಅಂತ್ಯಸಂಸ್ಕಾರ ನಡೆಸಲಾಗಿದೆ’ ಎಂದು ವರದಿ ನೀಡುವಂತೆ ಕೇಳಿದೆ.
ಇದೇ ವೇಳೆ, ಎಷ್ಟು ಪ್ರಕರಣಗಳಲ್ಲಿ ಕೋವಿಡ್‌ ಸೋಂಕಿತರ ಅಂತ್ಯಕ್ರಿಯೆಗೆ ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಗಳು ಆರ್ಥಿಕ ನೆರವು ನೀಡಿವೆ, ಶವಗಳನ್ನು ನದಿಗೆ ಎಸೆಯದೆ ಶಿಶ್ತುಬದ್ಧವಾಗಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಅರಿವು ಮೂಡಿಸಲು ಸರ್ಕಾರಗಳು ಯಾವ ಕ್ರಮ ತೆಗೆದುಕೊಂಡಿವೆ ಎಂದು ವಿವರ ನೀಡುವಂತೆ ಪೀಠ ಸೂಚಿಸಿದೆ.
ಹಾಗೆಯೇ ಅಂತ್ಯಕ್ರಿಯೆ ವೇಳೆ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಯಾವುದಾದರೂ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆಯೇ, ಪರಿಸರಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿದೆಯೇಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.