ಕೊಯಮತ್ತೂರು: ಪೊಲ್ಲಾಚಿ ಸಮೀಪ ಮತ್ತು ಕೊಯಮತ್ತೂರಿನ ಕೆಲವೆಡೆ ಮಾವೋವಾದಿ ನಕ್ಸಲ್ ಸಂಘಟನೆಯ ಶಂಕಿತ ಬೆಂಬಲಿಗರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಶೋಧ ಕೈಗೊಂಡಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಎನ್ಐಎಯು ದಂತ ವೈದ್ಯ ದಿನೇಶ್ ಎಂಬುವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ. ಮಾವೋವಾದಿ ನಕ್ಸಲ್ ಜತೆ ಸಂಪರ್ಕ ಹೊಂದಿದ್ದಾರೆ ಎನ್ನುವ ಶಂಕೆ ಮೇಲೆ ಕೇರಳ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ದಿನೇಶ್ ಅವರನ್ನು ಫೆಬ್ರುವರಿಯಲ್ಲಿ ಬಂಧಿಸಿ, ಪಕ್ಕದ ರಾಜ್ಯದ ಜೈಲಿನಲ್ಲಿರಿಸಿತ್ತು.
ಇದೇ ಮಾದರಿಯಲ್ಲಿ ಡ್ಯಾನಿಶ್ ಎಂಬುವವರ ಮನೆಯಲ್ಲೂ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಡ್ಯಾನಿಶ್ ಅವರನ್ನು ವಿವಿಧ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಆರೋಪದಲ್ಲಿ ಬಂಧಿಸಿ, ಕೇರಳದ ಜೈಲಿನಲ್ಲಿರಿಸಲಾಗಿತ್ತು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾವೋವಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಆರೋಪದಲ್ಲಿ ಪೊಲ್ಲಾಚಿ ಸಮೀಪದ ಅನಗಲಕುರಿಚಿಯಲ್ಲಿ ಸಂತೋಷ್ ಎನ್ನುವವರ ಮನೆಯಲ್ಲೂ ಎನ್ಐಎ ಅಧಿಕಾರಿಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಸಂತೋಷ್ ಐದು ವರ್ಷಗಳಿಂದ ನಾಪತ್ತೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.