ನವದೆಹಲಿ: ‘ನೂತನ ಅಗ್ನಿಪಥ ಯೋಜನೆಯಡಿ ಸೇನೆಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಯೋಜನೆಯಡಿ ಮೊದಲ ವರ್ಷದಲ್ಲಿ ನೇಮಕಗೊಳ್ಳುವ ಸಿಬ್ಬಂದಿ ಪ್ರಮಾಣ ಸೇನಾಪಡೆಗಳ ಶೇ 3ರಷ್ಟು ಇರಲಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.
‘ಅಗ್ನಿಪಥ’ ಯೋಜನೆ ವಿರೋಧಿಸಿ ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆ, ಹಿಂಸಾಚಾರ ನಡೆದಿರುವ ಬೆನ್ನಲ್ಲೇ ಸರ್ಕಾರದಿಂದ ಈ ಸ್ಪಷ್ಟನೆ ಹೊರಬಿದ್ದಿದೆ.
‘ಸೇನೆಯಲ್ಲಿ ಸೇವೆ ಸಲ್ಲಿಸ ಬಯಸುವ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಉದ್ದೇಶ. ಜೊತೆಗೆ, ನೇಮಕವಾಗುವ ಸಿಬ್ಬಂದಿ ಪ್ರಮಾಣವು ಈಗಿನದ್ದಕ್ಕಿಂತ ಮೂರುಪಟ್ಟು ಹೆಚ್ಚಾಗಲಿದೆ’ ಎಂದೂ ಹೇಳಿದೆ.
‘ನೇಮಕಗೊಂಡವರು ಅಲ್ಪಾವಧಿಗೆ ಸೇವೆ ಸಲ್ಲಿಸುವುದರಿಂದ ಸೇನಾಪಡೆಗಳ ಕಾರ್ಯಕ್ಷಮತೆಗೆ ಧಕ್ಕೆಯಾಗುವುದು ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂಥ ವ್ಯವಸ್ಥೆಯನ್ನು ಒರೆಗೆ ಹಚ್ಚಲಾಗಿದ್ದು, ಅತ್ಯುತ್ತಮ ವಿಧಾನ ಎಂಬುದಾಗಿ ಪರಿಗಣಿಸಲಾಗಿದೆ. ಈ ವ್ಯವಸ್ಥೆ ಈಗಾಗಲೇ ಹಲವಾರು ದೇಶಗಳಲ್ಲಿ ಜಾರಿಯಲ್ಲಿದೆ’ ಎಂದೂ ಕೇಂದ್ರ ಸರ್ಕಾರ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.