ನಾಗಪುರ: ‘ಏಕತೆ‘ ಎಂಬುದು ಭಾರತೀಯ ಸಂಸ್ಕೃತಿಯ ಬಹುದೊಡ್ಡ ಶಕ್ತಿ ಮತ್ತು ಈ ಶಕ್ತಿ ದೇಶವನ್ನು ‘ವಿಶ್ವ ಗುರು‘ವನ್ನಾಗುವಂತೆ ಮಾಡಿದೆ‘ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಲೋಕಮಾತಾ ಮೀಡಿಯಾ ಗ್ರೂಪ್ ಭಾನುವಾರ ತಮ್ಮ ಮಾಧ್ಯಮದ ನಾಗಪುರ ಆವೃತ್ತಿಯ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಅಂತರ್ ಧರ್ಮೀಯ ಸಮ್ಮೇಳದಲ್ಲಿ ‘ಕೋಮು ಸೌಹಾರ್ದತೆಗೆ ಜಾಗತಿಕ ಸವಾಲುಗಳು ಮತ್ತು ಭಾರತದ ಪಾತ್ರ‘ ಕುರಿತು ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ನೈಜ ಜಾತ್ಯತೀತವಾಗಿದೆ‘ ಎಂದು ಪ್ರತಿಪಾದಿಸಿದರು.
ಎಲ್ಲಾ ಮತ, ಧರ್ಮಗಳು, ಸಮುದಾಯ, ಸಿದ್ಧಾಂತಗಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ವಾಗಿದ್ದು, ಈ ಸಂಸ್ಕೃತಿ ಯಾವುದೋ ಒಂದು ಧರ್ಮದೊಂದಿಗೆ ಸಂಬಂಧವನ್ನು ಹೊಂದಿಲ್ಲ ಎಂದು ಅವರು ಹೇಳಿದರು.
‘ಏಕತೆ ಎನ್ನುವುದು ಭಾರತೀಯ ಸಂಸ್ಕೃತಿಯ ಬಹುದೊಡ್ಡ ಶಕ್ತಿ ಮತ್ತು ಇದು ನಮ್ಮ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಸ್ವಾಮಿ ವಿವೇಕಾನಂದರು ಆ ಕಾಲದಲ್ಲೇ ಭವಿಷ್ಯ ನುಡಿದಿದ್ದರು‘ ಎಂದು ಅವರು ಸ್ಮರಿಸಿದರು.
ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ‘ಮನುಷ್ಯ ಜೀವನ ವೈವಿಧ್ಯವನ್ನು ಬಯಸುತ್ತದೆ. ಆದರೆ, ನಮ್ಮಲ್ಲಿರುವ ತಿಳಿವಳಿಕೆಯ ಕೊರತೆ ಹಾಗೂ ಒತ್ತಡದಿಂದಾಗಿ ವೈವಿಧ್ಯವನ್ನು ದ್ವೇಷಿಸಲಾಗುತ್ತಿದೆ. ಇಲ್ಲಿ ಎಲ್ಲ ಸಮುದಾಯಗಳು ಪ್ರಮುಖವಾದವು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಪರಸ್ಪರ ಗೌರವಿಸುತ್ತಾ, ಒಂದಾಗಿ ನಡೆದುಕೊಳ್ಳುವುದು ಅಗತ್ಯವಾಗಿದೆ‘ ಎಂದು ಹೇಳಿದರು.
ವಿಡಿಯೊ ಸಂದೇಶವೊಂದರಲ್ಲಿ ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, 'ಧರ್ಮ' ಎಲ್ಲರನ್ನೂ ಒಗ್ಗೂಡಿಸುತ್ತದೆ. ಆದರೆ ಪರಸ್ಪರ ಸಂವಹನದ ಕೊರತೆಯಿಂದಾಗಿ ಅದನ್ನು ವಿಭಜಿಸುವ ಸಾಧನವಾಗಿ ಬಳಸಲಾಗುತ್ತಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.