ನವದೆಹಲಿ: ‘ಭಾರತದಲ್ಲಿ ನಡೆದಿರುವ ಭಯೋತ್ಪಾದನೆ ಚಟುವಟಿಕೆ ಸಂಪೂರ್ಣವಾಗಿ ಪಾಕಿಸ್ತಾನ ಪ್ರಾಯೋಜಿತ’ ಎಂಬುದನ್ನು ಆಪರೇಷನ್ ಸಿಂಧೂರ ಬಯಲು ಮಾಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು.
ಬಿಎಸ್ಎಫ್ನ 22ನೇ ಸ್ಥಾಪನಾ ದಿನದ ನಿಮಿತ್ತ ಇಲ್ಲಿ ರುಸ್ತಮ್ಜೀ ಸ್ಮಾರಕ ಉಪನ್ಯಾಸ ನೀಡಿದ ಅವರು, ‘ಸಿಂಧೂರ ಕಾರ್ಯಾಚರಣೆಯಲ್ಲಿ ಬಿಎಸ್ಎಫ್ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ’ ಎಂದರು.
ಭಾರತೀಯ ಸೇನೆ ಮೊದಲಿಗೆ ಪಾಕಿಸ್ತಾನದಲ್ಲಿನ ಉಗ್ರರ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿತು. ಆದರೆ, ಪಾಕ್ ಸೇನೆ ಇದಕ್ಕೆ ಪ್ರತಿಕ್ರಿಯೆ ನೀಡಿತು. ಈ ಬೆಳವಣಿಗೆಯು ಉಗ್ರರ ಚಟುವಟಿಕೆಗಳು ಪೂರ್ಣ ಪಾಕಿಸ್ತಾನ ಪ್ರಾಯೋಜಿತ ಎಂಬ ವಸ್ತುಸ್ಥಿತಿಯನ್ನು ಬಯಲು ಮಾಡಿತು ಎಂದು ಶಾ ವಿಶ್ಲೇಷಿಸಿದರು.
ಭಾರತೀಯ ಸೇನೆ ಎಂದಿಗೂ ಪಾಕ್ ಸೇನಾ ಸೌಲಭ್ಯ, ನಾಗರಿಕರ ಆಸ್ತಿಯನ್ನು ಗುರಿಯಾಗಿಸಿ ದಾಳಿ ನಡೆಸಿರಲಿಲ್ಲ. ಆದರೆ, ಪಾಕ್ ಸೇನೆ ದೇಶದ ಜನವಸತಿ ಗುರಿಯಾಗಿಸಿ ದಾಳಿ ನಡೆಸಿತು. ಹಾಗಿದ್ದೂ ದೇಶದ ರಕ್ಷಣಾ ವ್ಯವಸ್ಥೆ ಅದನ್ನು ವಿಫಲಗೊಳಿಸಿತು’ ಎಂದು ಶಾ ಶ್ಲಾಘಿಸಿದರು.
ಭಾರತ ಮತ್ತು ಪಾಕಿಸ್ತಾನ ಮೇ 10ರಂದು ಒಪ್ಪಂದಕ್ಕೆ ಬರುವ ಮೂಲಕ ಸೇನಾ ಸಂಘರ್ಷವನ್ನು ಕೊನೆಗಾಣಿಸಲು ತೀರ್ಮಾನಿಸಿದವು ಎಂದು ಅಮಿತ್ ಶಾ ಹೇಳಿದರು.
ಬಿಎಸ್ಎಫ್ ಅನ್ನು 1965ರಲ್ಲಿ ಸ್ಥಾಪಿಸಲಾಗಿದ್ದು, ಕೆ.ಎಫ್.ರುಸ್ತಮ್ಜೀ ಅವರು ಇದರ ಮೊದಲ ಪ್ರಧಾನ ನಿರ್ದೇಶಕರಾಗಿದ್ದರು. ಅವರ ನೆನಪಿಗಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.