ನವದೆಹಲಿ: ಮುಂಗಾರು ಋತುವಿನ ಬತ್ತದ ಬೆಳೆಯ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್ಗೆ ₹200ರಷ್ಟು ಏರಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಿರ್ಧರಿಸಿದೆ. ಬತ್ತವನ್ನು ಈ ವರ್ಷ ಕ್ವಿಂಟಲ್ಗೆ ₹1,750ರಂತೆ ಖರೀದಿಸಲಾಗುವುದು.
ಮುಂಗಾರು ಋತುವಿನ 14 ಬೆಳೆಗಳ ಬೆಂಬಲ ಬೆಲೆಯನ್ನು ಏರಿಸಲು ಸರ್ಕಾರ ನಿರ್ಧರಿಸಿದೆ. ರಾಗಿ ಮತ್ತು ಜೋಳಗಳು ಕೂಡ ಇದರಲ್ಲಿ ಸೇರಿವೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ರಾಧಾಮೋಹನ್ ಸಿಂಗ್ ಮತ್ತು ಹರ್ಸಿಮ್ರತ್ ಕೌರ್ ಅವರು ಸಂಪುಟ ಸಭೆಯ ಬಳಿಕ ಬೆಂಬಲ ಬೆಲೆ ಏರಿಕೆಯ ಮಾಹಿತಿ ಪ್ರಕಟಿಸಿದರು. ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ನೀಡಲಾಗುವುದು ಎಂದು ಲೋಕಸಭಾ ಚುನಾವಣೆ ವೇಳೆ ಭರವಸೆ ನೀಡಲಾಗಿತ್ತು. ಅದನ್ನು ಈಗ ಈಡೇರಿಸಲಾಗಿದೆ ಎಂದು ಈ ಸಚಿವರು ತಿಳಿಸಿದರು.
ರೈತರು ಉತ್ಪಾದಿಸುವ ಪ್ರತಿ ಧಾನ್ಯವನ್ನೂ ಸರ್ಕಾರ ಖರೀದಿಸಲಿದೆ. ಇದರಿಂದಾಗಿ ಗ್ರಾಹಕರ ಮೇಲೆ ಸ್ವಲ್ಪ ಹೊರೆಯಾಗಬಹುದು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.