ADVERTISEMENT

ಜಾಧವ್ ಕಾನ್ಸಲ್ ಭೇಟಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 5:50 IST
Last Updated 2 ಆಗಸ್ಟ್ 2019, 5:50 IST

ನವದೆಹಲಿ: ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸಿದ ಆರೋಪದಲ್ಲಿ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಕಾನ್ಸಲ್ ನೆರವು ನೀಡುವುದಾಗಿ ಪಾಕಿಸ್ತಾನ ಹೇಳಿದೆ.

2017ರ ಏಪ್ರಿಲ್‌ನಿಂದಲೂ ಜಾಧವ್ ಪಾಕಿಸ್ತಾನದಲ್ಲಿ ಬಂಧನದಲ್ಲಿದ್ದಾರೆ. ಪಾಕಿಸ್ತಾನದ ಸೇನಾ ನ್ಯಾಯಾಲಯವು ಅವರಿಗೆ ಮರಣದಂಡನೆ ಘೋಷಿಸಿದೆ. ಆದರೆ ಈ ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯವು ತಡೆ ನೀಡಿದೆ.

ಜಾಧವ್ ಅವರನ್ನು ಭೇಟಿ ಮಾಡಲು ಮತ್ತು ಅಗತ್ಯ ಕಾನ್ಸಲ್ ನೆರವು ನೀಡಲು ಅವಕಾಶ ನೀಡಬೇಕು ಎಂದು ಭಾರತ ಹಲವು ಭಾರಿ ಮನವಿ ಮಾಡಿಕೊಂಡಿತ್ತು. ಪಾಕಿಸ್ತಾನ ಇದಕ್ಕೆ ಪೂರಕವಾಗಿ ಸ್ಪಂದಿಸಿರಲಿಲ್ಲ. ಆದರೆ ಕಾನ್ಸಲ್ ನೆರವಿಗೆ ಅವಕಾಶ ನೀಡಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯವು ಜುಲೈ 16ರ ತನ್ನ ತೀರ್ಪಿನಲ್ಲಿ ಆದೇಶಿಸಿತ್ತು.

ADVERTISEMENT

‘ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶದನ್ವಯ ನೀವು ಕಾನ್ಸಲ್ ನೆರವಿಗೆ ಅವಕಾಶ ನೀಡಲೇಬೇಕು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಿಂದಿನ ವಾರ ಪಾಕಿಸ್ತಾನವನ್ನು ಒತ್ತಾಯಿಸಿತ್ತು.

‘ಕಾನ್ಸಲ್ ನೆರವಿಗೆ ಅವಕಾಶ ನೀಡುವ ಪ್ರಸ್ತಾವವನ್ನು ಪಾಕಿಸ್ತಾನ ನಮ್ಮ ಮುಂದಿರಿಸಿದೆ. ಅದನ್ನು ಪರಿಶೀಲಿಸುತ್ತಿದ್ದೇವೆ. ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್ ಅಧಿಕಾರಿಗಳು ಈ ಪ್ರಸ್ತಾವವನ್ನು ಪರಿಶೀಲಿಸಲಿದ್ದಾರೆ. ಆನಂತರವೇ ನಾವು ಪಾಕಿಸ್ತಾನಕ್ಕೆ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.