ನವದೆಹಲಿ: ಪಾಲ್ಘರ್ನಲ್ಲಿ ಇಬ್ಬರು ಸಾಧುಗಳು ಸೇರಿದಂತೆ ಮೂವರ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಪೂರಕ ಚಾರ್ಜ್ಶೀಟ್ ಸಲ್ಲಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ಸುಪ್ರೀಂಕೋರ್ಟ್ ಬುಧವಾರ ಸೂಚಿಸಿತು.
ನ್ಯಾಯಮೂರ್ತಿಗಳಾದ ಅಶೋಕಭೂಷಣ್ ಹಾಗೂ ಆರ್.ಎಸ್.ರೆಡ್ಡಿ ಅವರಿರುವ ನ್ಯಾಯಪೀಠ ಈ ಸೂಚನೆ ನೀಡಿತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡನೇ ಪೂರಕ ಚಾರ್ಜ್ಶೀಟ್ ಅನ್ನು ಸಲ್ಲಿಸಲಾಗಿದೆ ಎಂದು ಮಹಾರಾಷ್ಟ್ರ ಪರ ವಕೀಲ ನ್ಯಾಯಪೀಠಕ್ಕೆ ತಿಳಿಸಿದರು. ಆಗ, ಎರಡು ವಾರಗಳಲ್ಲಿ ಹೊಸದಾಗಿ ಚಾರ್ಜ್ಶೀಟ್ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಕಳೆದ ವರ್ಷ ಏಪ್ರಿಲ್ 16ರಂದು ಮುಂಬೈನ ಕಾಂದಿವಲಿಯಿಂದ ಗುಜರಾತ್ನ ಸೂರತ್ಗೆ ಇಬ್ಬರು ಸಾಧುಗಳು ಕಾರಿನಲ್ಲಿ ಹೊರಟಿದ್ದರು. ಪಾಲ್ಘರ್ ಜಿಲ್ಲೆಯ ಗಡಚಿಂಚಿಲಿ ಗ್ರಾಮದಲ್ಲಿ ಅಂದು ರಾತ್ರಿ ಈ ಸಾಧುಗಳಿದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಪೊಲೀಸರ ಎದುರೇ ಸಾಧುಗಳ ಮೇಲೆ ಬಡಿಗೆಗಳಿಂದ ಹಲ್ಲೆ ನಡೆಸಿದ್ದ ಗುಂಪು, ಅವರನ್ನು ಹತ್ಯೆ ಮಾಡಿತು ಎಂದು ಆರೋಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.