ಪಟ್ನಾ: ಡೆಂಗಿ ನಿಯಂತ್ರಣ ಕ್ರಮಗಳ ಪರಿಶೀಲನೆಗೆ ಇಲ್ಲಿನ ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರದ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರ ಮೇಲೆ ಇಂಕ್ ಎರಚಿರುವ ಘಟನೆ ನಡೆದಿದೆ. ವಿವಾದಿತ ರಾಜಕಾರಣಿ ಪಪ್ಪು ಯಾದವ್ ಬೆಂಬಲಿಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಿಂದ ಹೊರ ಬಂದು ಸಚಿವರು ಕಾರು ಹತ್ತುವ ಯತ್ನದಲ್ಲಿದ್ದಾಗ ಇಂಕ್ ಇದ್ದ ಬಾಟೆಲ್ನೊಂದಿಗೆ ಬಂದ ವ್ಯಕ್ತಿ ಸಚಿವರ ಮೇಲೆ ಎರಚಿದ್ದಾನೆ. ಶಾಹಿ ಸಚಿವರ ಉಡುಪು ಹಾಗೂ ಕಾರಿನ ಕಿಟಕಿ, ಕವಚದ ಮೇಲೆ ಬಿದ್ದಿತು.
ಘಟನೆಯಿಂದ ವಿಚಲಿತರಾದಂತೆ ಕಂಡ ಸಚಿವರು, ‘ಇದು, ರಾಜಕಾರಣ ಪ್ರವೇಶಿಸುವ ಮೊದಲು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಕೃತ್ಯ’ ಎಂದು ಅಸಮಾಧಾನ ಹೊರಹಾಕಿದರು. ಆದರೆ,ಸಚಿವರು ನೇರವಾಗಿ ಪಪ್ಪು ಯಾದವ್ ಅವರ ಹೆಸರು ಉಲ್ಲೇಖಿಸಲಿಲ್ಲ.
ಸ್ಥಳದಲ್ಲಿದ್ದ, ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರ ಬೆಂಬಲಿಗರು ಮಳೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡದ ಸರ್ಕಾರದ ಧೋರಣೆ ಖಂಡಿಸಿ ಘೋಷಣೆಗಳನ್ನು ಕೂಗುತ್ತಿದ್ದರು.ಘಟನೆ ಕುರಿತಂತೆ ಯಾದವ್, ‘ಘಟನೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಜನರಲ್ಲಿ ಅಧಿಕಾರಲ್ಲಿರುವವವರ ವಿರುದ್ಧ ಆಕ್ರೋಶವಿದೆ. ಅದು, ಹೀಗೆ ವ್ಯಕ್ತವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.